ಬಾಗಲಕೋಟೆ, ಜು. 26 : ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ ಮಹಿಂದ್ರಾ ಎಕ್ಸ್ ಯುವಿ 300 ಕಾರು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಕಾರು ಪಲ್ಟಿಯಾಗಿ ಹೊತ್ತಿ ಉರಿದು, ಬಿಡಿ ಭಾಗಗಳು ಛಿದ್ರ ಛಿದ್ರವಾಗಿ ಬಿದ್ದಿವೆ. ಕಾರು ಸ್ಫೋಟದಿಂದ ಓರ್ವ ಗಾಯಗೊಂಡಿದ್ದಾನೆ ಎಂದು ತಿಳಿದು ಬಂದಿದೆ.
ಗ್ರಾಮದ ಬಳಿ ಯುವರಾಜ ವೈನ್ ಶಾಪ್ ಎದುರು ಈ ಅವಘಡ ಸಂಭವಿಸಿದೆ. ಕಾರು ಎಂ.ಜಿ ತೋರಗಲ್ ಎಂಬವರ ಹೆಸರಲ್ಲಿದ್ದು, ವೈನ್ ಶಾಪ್ ಮ್ಯಾನೇಜರ್ ಹನುಮಂತ ಸಂಗೊಂಡ ಅವರು ತಂದಿದ್ದರು.
ಬಾರ್ ಎದುರು ನಿಲ್ಲಿಸಿದ್ದಾಗ ಕಾರು ಸ್ಪೋಟಗೊಂಡಿದೆ.
ಸ್ಥಳಕ್ಕೆ ಜಮಖಂಡಿ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸೊಕೊ ಟೀಮ್ ಹಾಗೂ ಜಮಖಂಡಿ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಾಂಬ್ ಇಟ್ಟಿರುವ ಶಂಕೆ !
ಕಾರಲ್ಲಿ ಒಂದೇ ಒಂದು ಡ್ಯಾಮೇಜ್ ಇರಲಿಲ್ಲ. ಯಾರೋ ಬಾಂಬ್ ಇಟ್ಟಿರಬಹುದು ಎಂದು ಹನಮಂತ ಶಂಕೆ ವ್ಯಕ್ತಪಡಿಸಿದ್ದಾರೆ. ಅದೃಷ್ಟವಶಾತ್ ಕಾರು ಚಾಲನೆಯಲ್ಲಿ ಇರಲಿಲ್ಲ. ಚಾಲನೆಯಲ್ಲಿದ್ದಿದ್ದರೆ ಪ್ರಾಣಾಪಾಯ ಆಗುವ ಸಂಭವ ಇತ್ತು.


