ಬೆಂಗಳೂರು, ಮೇ. 02 : ಮಹಿಳೆಯರ ಜತೆ ಲೈಂಗಿಕ ಸಂಪರ್ಕ ನಡೆಸಿ ವಿಡಿಯೋ ಮಾಡಿಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಆರೋಪ ಪ್ರಕರಣದಲ್ಲಿ ಕಿರುತೆರೆ ನಟ, ಬೆಂಗಳೂರು ದಕ್ಷಿಣ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಡಾ.ಹನಿಯೂರು ಚಂದ್ರೇಗೌಡನನ್ನು ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ಮೊಬೈಲ್ನಲ್ಲಿ 20ಕ್ಕೂ ಹೆಚ್ಚು ಮಹಿಳೆಯರ ಜತೆಗಿನ ಖಾಸಗಿ ಕ್ಷಣಗಳ ಫೋಟೊಗಳು ಪತ್ತೆಯಾಗಿದ್ದು, ಇವುಗಳನ್ನು ಕಂಡು ಪೊಲೀಸರೇ ದಂಗಾಗಿದ್ದಾರೆ.
43 ವರ್ಷದ ಮೇಕಪ್ ಆರ್ಟಿಸ್ಟ್ಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ಸಂಪರ್ಕ ಬೆಳೆಸಿರುವುದು ಹಾಗೂ ಸರಕಾರಿ ಅಧಿಕಾರಿ ಎಂದು ಹೇಳಿಕೊಂಡು ವಂಚಿಸಿದ್ದ ಆರೋಪ ಪ್ರಕರಣದಲ್ಲಿ ಆರೋಪಿ ಹನಿಯೂರು ಚಂದ್ರೇಗೌಡನನ್ನು ಬಂಧಿಸಲಾಗಿದೆ. ಮತ್ತಷ್ಟು ಮಹಿಳೆಯರಿಗೆ ಇದೇ ಮಾದರಿಯಲ್ಲಿ ವಂಚಿಸಿರುವ ಶಂಕೆಯಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ.
ಮೊಬೈಲ್ನಲ್ಲಿ ಕಾಮಕಾಂಡ
ಫೇಸ್ಬುಕ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಒಂಟಿ ಮಹಿಳೆಯರನ್ನು ಚಂದ್ರೇಗೌಡ ಪರಿಚಯಿಸಿಕೊಳ್ಳುತ್ತಿದ್ದ. ಬಳಿಕ ಅವರ ಜತೆ ಚಾಟಿಂಗ್ ಹಾಗೂ ವಿಡಿಯೋ ಕರೆ ಮಾಡಿ ಮಾತನಾಡುತ್ತಿದ್ದ. ಬಳಿಕ ನಾನಾ ಆಮಿಷಗಳನ್ನೊಡ್ಡಿ ಅವರ ಜತೆ ಖಾಸಗಿ ಕ್ಷಣಗಳನ್ನು ಕಳೆದು ಹಣ ಹಾಗೂ ಆಭರಣ ಪಡೆದು ಮೋಸ ಮಾಡುತ್ತಿದ್ದ. ಚಂದ್ರೇಗೌಡನ ಮೊಬೈಲ್ ಪರಿಶೀಲಿಸಿದಾಗ ಇಂತಹ ಹಲವು ಫೋಟೊಗಳು ಕಂಡು ಬಂದಿದ್ದವು ಎಂದು ದೂರುದಾರೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಎಸ್ಪಿ, ಉಪನ್ಯಾಸಕ ಹಾಗು ನಟ ಎಂದೆಲ್ಲಾ ಎಂದು ಬಿಲ್ಡಪ್!
ಆರೋಪಿಯು ಪೊಲೀಸ್ ವರಿಷ್ಠಾಧಿಕಾರಿ , ಕಾಲೇಜು ಉಪನ್ಯಾಸಕ, ಕಿರುತೆರೆ ನಟ, ವಕೀಲರ ಸೋಗಿನಲ್ಲಿ ಮಹಿಳೆಯರನ್ನು ಪರಿಚಯಿಸಿಕೊಳ್ಳುತ್ತಿದ್ದ. ಕಿರುತೆರೆಯಲ್ಲಿ ನಟನೆಗೆ ಅವಕಾಶ, ಮದುವೆಯಾಗುವ ಭರವಸೆ ಸೇರಿದಂತೆ ಹಲವು ಆಮಿಷಗಳನ್ನೊಡ್ಡಿ ಅವರ ಜತೆ ಖಾಸಗಿ ಕ್ಷಣಗಳನ್ನು ಕಳೆಯುತ್ತಿದ್ದ. ಈ ಸಂದರ್ಭದಲ್ಲಿ ಅವರಿಗೆ ಗೊತ್ತಾಗದಂತೆ ವಿಡಿಯೋ ಹಾಗೂ ಫೋಟೊ ಸೆರೆ ಹಿಡಿಯುತ್ತಿದ್ದ. ಇವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಕೆಯೊಡ್ಡಿ ಹಣ ಪಡೆದು ವಂಚಿಸುತ್ತಿದ್ದ ಎಂಬುದು ಗೊತ್ತಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಪೊಲೀಸ್ ತನಿಖಾ ಮೂಲಗಳು ಹೇಳಿವೆ.
2021ರಲ್ಲಿ ಸಂತ್ರಸ್ತೆಗೆ ಚಂದ್ರೇಗೌಡ ಪರಿಚಯವಾಗಿದ್ದು, ಸಿನಿಮಾ ರಂಗದಲ್ಲಿ ಮೇಕಪ್ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಹತ್ತಿರವಾಗಿದ್ದ. ಬಳಿಕ ಆಕೆಯ ಮನೆಗೆ ಆಗಾಗ್ಗೆ ತೆರಳಿ ಖಾಸಗಿ ಕ್ಷಣಗಳನ್ನು ಕಳೆದಿದ್ದ. ಖಾಸಗಿ ವಿಡಿಯೋ ಹಾಗೂ ಫೋಟೊ ಮುಂದಿಟ್ಟು ಸುಮಾರು ಐದು ಲಕ್ಷ ರೂ. ಪಡೆದು ವಂಚಿಸಿದ್ದ ಎಂದು ಸಂತ್ರಸ್ತೆ ಆರೋಪಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.
‘‘ತಾನು ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಎಂದು ನಕಲಿ ಐಡಿ ಕಾರ್ಡ್ ಸೃಷ್ಟಿಸಿಕೊಂಡಿದ್ದ ಚಂದ್ರೇಗೌಡ, ಇದೇ ಕಾರ್ಡ್ ಅನ್ನು ಟೋಲ್ಗಳಲ್ಲಿ ಬಳಸುತ್ತಿದ್ದ. ಜತೆಗೆ, ಮಕ್ಕಳ ಕಲ್ಯಾಣ ಸಮಿತಿ ಜಡ್ಜ್ ಎಂದು ಸುಳ್ಳು ಹೇಳಿ ಅನುಕೂಲ ಪಡೆಯುತ್ತಿದ್ದ’’ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ. ಆರೋಪಿಯು ಹೊಂದಿದ್ದ ನಕಲಿ ಐಡಿ ಕಾರ್ಡ್ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ತನಿಖಾ ಮೂಲಗಳು ತಿಳಿಸಿವೆ.
ಸಂತ್ರಸ್ತೆಯರಿದ್ದರೆ ದೂರು ನೀಡಿ
ಆರೋಪಿ ಚಂದ್ರೇಗೌಡನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗೆ ಕಸ್ಟಡಿಗೆ ಪಡೆಯಲಾಗುವುದು. ಆರೋಪಿಯ ಮೊಬೈಲ್ ಜಪ್ತಿ ಮಾಡಿದ್ದು, ಎಫ್ಎಸ್ಎಲ್ಗೆ ಕಳಿಸಲಾಗುವುದು. ಆರೋಪಿಯ ಮೊಬೈಲ್ನಲ್ಲಿ ಕೆಲ ಮಹಿಳೆಯರ ಜತೆಗಿನ ಖಾಸಗಿ ಕ್ಷಣಗಳ ಫೋಟೊ ಪತ್ತೆಯಾಗಿದೆ. ಆರೋಪಿಯಿಂದ ಮೋಸ ಹೋದ ಸಂತ್ರಸ್ತೆಯರು ದೂರು ನೀಡಬಹುದು. ದೂರುದಾರರ ವಿವರ ಗೌಪ್ಯವಾಗಿರಿಸಲಾಗುವುದು. ಆರೋಪಿಯ ಕೃತ್ಯಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಆರ್ಟಿಐ ಹೆಸರಲ್ಲಿ ಸುಲಿಗೆ
ರಾಜ್ಯ ಎನ್ಎಸ್ಎಸ್ ಸಂಸ್ಥೆಯ ಅಧಿಕಾರಿ ಡಾ.ಎನ್ ಪ್ರತಾಪ್ ಲಿಂಗಯ್ಯ ಅವರನ್ನು ಬೆದರಿಸಿ 15 ಲಕ್ಷ ರೂ.ಬೇಡಿಕೆ ಇಟ್ಟ ಆರೋಪ ಸಂಬಂಧ ಹನಿಯೂರು ಚಂದ್ರೇಗೌಡ ವಿರುದ್ಧ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ. ಎನ್ಎಸ್ಎಸ್ ಸಂಸ್ಥೆಯ ಕುರಿತು ನಿರಂತರವಾಗಿ ಆರ್ಟಿಐ ಸಲ್ಲಿಸಿ ಚಂದ್ರೇಗೌಡ ಕಿರುಕುಳ ನೀಡುತ್ತಿದ್ದ. ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಬೆದರಿಸಿದ್ದ ಎಂದು ಪ್ರತಾಪ್ ಲಿಂಗಯ್ಯ ಆರೋಪಿಸಿದ್ದರು.

