ರಾಜಸ್ಥಾನ, ಆ. 21 : ಸರ್ಕಾರಿ ಶಾಲೆ ಪರಿಶೀಲನೆಗೆ ತೆರಳಿದ್ದ ಕಾಕ್ರೋಚ್ ಜನತಾ ಪಾರ್ಟಿ (CJP) ನಾಯಕರು ಮತ್ತು ಸದಸ್ಯರ ಮೇಲೆ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿ ಬೆನ್ನಟ್ಟಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಕೆಲವು ದಿನಗಳ ಹಿಂದಷ್ಟೇ ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಅವರು ತಮ್ಮ ಮುಂದಿನ ಹೋರಾಟ ದೇಶಾದ್ಯಂತ ಇರುವ ಸರ್ಕಾರಿ ಶಾಲೆಗಳ ಸಮಸ್ಯೆಗಳ ವಿಚಾರವಾಗಿ ಎಂಬ ಘೋಷಣೆ ಮಾಡಿದ್ದರು. ಹೀಗಾಗಿ ಜೈಪುರ ಜಿಲ್ಲೆಯ ಬಗ್ರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರಾಮ್ಪುರ ಕನ್ವರ್ಪುರ ಗ್ರಾಮದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ಪರಿಶೀಲನೆಗೆ ಇಂದು ಸಿಜೆಪಿ ಸಹ-ಸಂಸ್ಥಾಪಕ ಅಶುತೋಷ್ ರಾಂಕಾ ನೇತೃತ್ವದ ತಂಡ ಆಗಮಿಸಿತ್ತು.
ಗ್ರಾಮದ ಸರ್ಕಾರಿ ಶಾಲೆಗೆ ಭೇಟಿ ನೀಡಲು ಮುಂದಾದಾಗ ಈ ದಾಳಿ ನಡೆದಿದೆ. ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜನರ ಗುಂಪು ಸಿಜೆಪಿ ನಾಯಕರನ್ನು ಸುತ್ತುವರಿದು ನಿಂದಿಸಿದ್ದಾರೆ. “ಅರ್ಬನ್ ನಕ್ಸಲರು”, “ದೇಶದ್ರೋಹಿಗಳು” ಹಾಗೂ “ಪಾಕಿಸ್ತಾನಿಗಳು” ಎಂದು ಘೋಷಣೆ ಕೂಗಿ ಹಲ್ಲೆ ನಡೆಸಿದ್ದಾರೆ. ಉದ್ರಿಕ್ತ ಗುಂಪಿನಿಂದಾಗಿ ನಾಯಕರು ಶಾಲೆ ಪರಿಶೀಲಿಸದೆ ಅರ್ಧದಲ್ಲೇ ಗ್ರಾಮದಿಂದ ಕಾಲ್ಕಿತ್ತಿದ್ದಾರೆ.




