ಬೆಂಗಳೂರು, ಜು. 29 : ಬಾಲಕಿಯೊಬ್ಬಳು ಮನೆಯಲ್ಲಿ ಒಂಟಿಯಾಗಿದ್ದ ವೇಳೆ ಮನೆಗೆ ನುಗ್ಗಿದ ಆಗಂತುಕರು ನಕಲಿ ಪಿಸ್ತೂಲ್ ತೋರಿಸಿ ನಗದು, ಚಿನ್ನಭಾರಣ ದೋಚಿ ಪರಾರಿಯಾಗಿದ್ದರು. ಸದ್ಯ ಇಬ್ಬರು ದರೋಡೆಕೋರರನ್ನು ಜೆ.ಜೆ. ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಚಾಮರಾಜಪೇಟೆ ನಿವಾಸಿ ಅಶ್ರಫ್ (22) ಮತ್ತು ಪಾದರಾಯನಪುರದ ಅಷ್ಟಲ್ ಅಲಿಯಾಸ್ ಡಿಚ್ಚಿ (32) ಬಂಧಿತ ಆರೋಪಿಗಳು. ಆರೋಪಿಗಳಿಂದ 25 ಲಕ್ಷ ರೂ. ಮೌಲ್ಯದ 139 ಗ್ರಾಂ ಚಿನ್ನಾಭರಣ, 8 ಲಕ್ಷ ರೂ. ನಗದು, ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಜುಲೈ 6 ರಂದು ಪಾದರಾಯನಪುರ 7ನೇ ಕ್ರಾಸ್ನಲ್ಲಿರುವ ಮನೆಗೆ ನುಗ್ಗಿ ದರೋಡೆ ಮಾಡಿದ್ದರು. ಪಾದರಾಯನಪುರದ 7ನೇ ಕ್ರಾಸ್ ನಲ್ಲಿರುವ ಕಟ್ಟಡವೊಂದರ 4ನೇ ಮಹಡಿ ಯಲ್ಲಿ ತಾಯಿ, ಮಗಳು ವಾಸವಾಗಿದ್ದರು. ಜುಲೈ 6ರಂದು ಕಾರ್ಯನಿಮಿತ್ತ ತಾಯಿ ಹೊರಹೋಗಿದ್ದರು. ಹೀಗಾಗಿ ಮನೆಯಲ್ಲಿ ಮಗಳು ಒಬ್ಬಳೇ ಇದ್ದಳು. ಈ ವೇಳೆ ಮನೆಗೆ ನುಗ್ಗಿದ ಆರೋಪಿಗಳು ನಕಲಿ ಪಿಸ್ತೂಲ್ನಿಂದ ಬಾಲಕಿಯ ತಲೆಗೆ ಹೊಡೆದು ಗಾಯಗೊಳಿಸಿದ್ದರು.
ಚಾಕುವಿನಿಂದ ಬೆದರಿಸಿ, ಕೊಠಡಿಯ ಬೀರುವಿನಲ್ಲಿಟ್ಟಿದ್ದ 199.71 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ರೂ. ನಗದು ದೋಚಿಕೊಂಡು ಪರಾರಿಯಾಗಿದ್ದರು. ತಾಯಿ ಮನಗೆ ಬಂದ ನಂತರ ದರೋಡೆ ಬಗ್ಗೆ ಬಾಲಕಿ ತಿಳಿಸಿದ್ದಾಳೆ. ನಂತರ ಅವರು ಪೊಲೀಸರಿಗೆ ದೂರು ನೀಡಿದರು. ಈ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಗಳ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.




