ಬೆಳ್ತಂಗಡಿ, ಏ. 30 : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್ ಇದರ ವತಿಯಿಂದ 54ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಬುಧವಾರ ಸಂಜೆ ಗೋಧೂಳಿ ಲಗ್ನದಲ್ಲಿ ನೆರವೇರಿತು.

ಸಮಾರಂಭದಲ್ಲಿ 106 ಜೋಡಿಗಳು ಸಂಜೆ ದೇವಸ್ಥಾನದ ಬಳಿಯಿಂದ ಗಣ್ಯರ ಉಪಸ್ಥಿತಿಯಲ್ಲಿ 106 ಜೋಡಿಗಳ ಮದುವೆ ದಿಬ್ಬಣವನ್ನು ಕೊಂಬು, ವಾದ್ಯ, ಆನೆಯೊಂದಿಗೆ ಮೆರವಣಿಗೆಯಲ್ಲಿ ಅಮೃತ ವರ್ಷಿಣಿ ಸಭಾಭವನಕ್ಕೆ ಕರೆ ತಂದರು.

ಸಂಜೆ 6.10ಕ್ಕೆ ವಧುವರರಿಗೆ ಮಾಂಗಲ್ಯ ವಿತರಣೆ ಮಾಡಲಾಯಿತು. ಕ್ಷೇತ್ರದ ಅರ್ಚಕರಾದ ವಸಂತ ಮಂಚಿತ್ತಾಯ ಮತ್ತು ಬಳಗದಿಂದ ವೇದಘೋಷ, ಮಂಗಲವಾದ್ಯ, ಮಂತ್ರಾಕ್ಷತೆ ವಿತರಣೆ ನಡೆದು, ಗೋಧೋಳಿ ಲಗ್ನ 6.40 ಸುಮೂಹೂರ್ತದಲ್ಲಿ ಧರ್ಮಾಧಿಕಾರಿ ಡಾ. ಹೆಗ್ಗಡೆ ದಂಪತಿ, ಕುಟುಂಬಸ್ಥರ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ವಧುವರರು ಹಾರ ವಿನಿಮಯ, ಮಾಂಗಲ್ಯ ಧಾರಣೆ ಮಾಡುವ ಮೂಲಕ ಉಚಿತ ಸಾಮೂಹಿಕ ವಿವಾಹದಲ್ಲಿ ಸತಿಪತಿಗಳಾಗಿ ಹೊಸ ಜೀವನಕ್ಕೆ ಕಾಲಿರಿಸಿದರು.

ಸಮಾರಂಭದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ. ಹೇಮಾವತಿ ಹೆಗ್ಗಡೆ, ಹರ್ಷೇಂದ್ರ ಕುಮಾರ್, ಶಾಸಕರಾದ ಶ್ರೀ ಹರೀಶ್ ಪೂಂಜಾ, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಶಾಸಕರಾದ ಶ್ರೀ ಪ್ರತಾಪ್ ಸಿಂಹ ನಾಯಕ್, ಬೆಂಗಳೂರು ಕ್ಷೇಮವನ ಸಿ.ಇ.ಒ ಶ್ರದ್ದಾ ಅಮಿತ್ ಉಪಸ್ಥಿತರಿದ್ದರು.


