ಮಡಿಕೇರಿ, ಮೇ. 08 : ಬೆಂಗಳೂರಿನಿಂದ ಸುಳ್ಯ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಖಾಸಗಿ ಬಸ್ಸೊಂದರ ಚಾಲಕನಿಗೆ ಹೃದಯಾಘಾತವಾಗಿ ಬಸ್ ನಿಯಂತ್ರಣ ತಪ್ಪಿ ಬರೆಗೆ ಗುದ್ದಿ ನಿಂತ ಘಟನೆ ಮೇ.8ರ ಮುಂಜಾನೆ ಮಡಿಕೇರಿ ಬಳಿಯ ಕಾಟಿಗೇರಿಯಲ್ಲಿ ನಡೆದಿದೆ.
ಘಟನೆಯಲ್ಲಿ ಬಸ್ ಚಾಲಕ ನಿಧನ ಹೊಂದಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಖಾಸಗಿ ಬಸ್ ಗುರುವಾರ ರಾತ್ರಿ ಬೆಂಗಳೂರಿನಿಂದ ಹೊರಟಿತು. ಶುಕ್ರವಾರ ಮುಂಜಾನೆ ಮಡಿಕೇರಿ ದಾಟಿ ಬರುತ್ತಿರುವಾಗ ಕಾಟಿಕೇರಿ ಬಳಿ ತಿರುವಿನಲ್ಲಿ ಬಸ್ ಚಾಲಕ ಶಿವಕುಮಾರ್ ಅವರಿಗೆ ಹೃದಯಾಘಾತವಾಗಿದೆ. ಬಸ್ ನಿಯಂತ್ರಣ ತಪ್ಪಿ ಬದಿಗೆ ಸರಿದು ಬರೆಗೆ ಒರಗಿ ನಿಂತಿದೆ. ಬಸ್ ಚಾಲಕ ಕುಳಿತಲ್ಲೇ ಸಾವನ್ನಪ್ಪಿದ್ದಾರೆ.
ಹೃದಯಾಘಾತವಾದ ಸಂದರ್ಭ ಚಾಲಕ ಶಿವಕುಮಾರ್ ಬಸ್ ನಿಲ್ಲಿಸಲು ಯತ್ನಿಸಿ ಸಾಧ್ಯವಾಗದಿದ್ದಾಗ ಬದಿಗೆ ಕೊಂಡೊಯ್ದು ಬರೆಗೆ ಗುದ್ದಿಸಿ ನಿಲ್ಲಿಸಿದರೆಂದು ಹೇಳಲಾಗುತ್ತಿದೆ.

