ಕೋಲ್ಕತ್ತಾ, ಮೇ. 06 : ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ ಪಾರ್ಟಿ ಐತಿಹಾಸಿಕ ಗೆಲುವು ಪಡೆದುಕೊಳ್ಳುತ್ತಿದ್ದಂತೆ ಅಸನ್ಸೆಲ್ನ ಬಾಸ್ಟಿನ್ ಬಜಾರ್ನಲ್ಲಿ ಕಳೆದ ಹದಿನೈದು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಐತಿಹಾಸಿಕ ದುರ್ಗಾ ದೇವಸ್ಥಾನವನ್ನು ಸಾರ್ವಜನಿಕರ ದರ್ಶನಕ್ಕೆ ಮುಕ್ತಗೊಳಿಸಲಾಯಿತು. ಮುಂಜಾಗ್ರತಾ ಕ್ರಮವಾಗಿ ದೇಗುಲದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಭರವಸೆ ಈಡೇರಿಸಿದ ಕೃಷ್ಣಂದು ಮುಖರ್ಜಿ
ಕಳೆದ ಒಂದೂವರೆ ದಶಕದಿಂದ ಈ ದೇವಸ್ಥಾನವು ದುರ್ಗಾ ಪೂಜೆ, ಕಾಳಿ ಪೂಜೆ ಮತ್ತು ಲಕ್ಷ್ಮಿ ಪೂಜೆಯಂತಹ ಪ್ರಮುಖ ಹಬ್ಬಗಳ ಸಂದರ್ಭದಲ್ಲಿ ಮಾತ್ರ ತೆರೆಯಲ್ಪಡುತ್ತಿತ್ತು. ಉಳಿದ ದಿನಗಳಲ್ಲಿ ದೇಗುಲದ ಬಾಗಿಲು ಮುಚ್ಚಿರುತ್ತಿತ್ತು. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯ ಕೃಷ್ಣಂದು ಮುಖರ್ಜಿ ಅವರು, “ತಾವು ಗೆದ್ದರೆ ವರ್ಷದ 365 ದಿನಗಳೂ ದೇಗುಲ ತೆರೆದಿರುವಂತೆ ನೋಡಿಕೊಳ್ಳುವುದಾಗಿ” ಮತದಾರರಿಗೆ ಭರವಸೆ ನೀಡಿದ್ದರು. ಅದರಂತೆ ಚುನಾವಣೆಯಲ್ಲಿ ಗೆಲುವು ಸಾಧಿಸುತ್ತಿದ್ದಂತೆ ಬಾಸ್ಟಿನ್ ಬಜಾರ್ಗೆ ಭೇಟಿ ನೀಡಿದ ಮುಖರ್ಜಿ ಅವರು, ಸ್ವತಃ ದೇಗುಲದ ಬೀಗ ತೆಗೆಯುವ ಮೂಲಕ ತಾವು ಕೊಟ್ಟ ಭರವಸೆಯನ್ನು ಈಡೇರಿಸಿದ್ದಾರೆ.
ಭಕ್ತರ ದಂಡು – ಆಡಳಿತ ಮಂಡಳಿ ಹದ್ದಿನ ಕಣ್ಣು
ದೇಗುಲ ಪೂರ್ಣ ಪ್ರಮಾಣದಲ್ಲಿ ಪುನಾರಂಭಗೊಂಡ ಹಿನ್ನೆಲೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ದಶಕಗಳ ನಂತರ ನಿರಂತರ ಪೂಜಾ ಕೈಂಕರ್ಯಗಳು ಆರಂಭವಾಗಿರುವುದು ಭಕ್ತರಲ್ಲಿ ಸಡಗರ ಮೂಡಿಸಿದೆ. ಆದರೆ, ರಾಜ್ಯದ ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ಮಂಡಳಿ ಮತ್ತು ಪೊಲೀಸ್ ಇಲಾಖೆ ತೀವ್ರ ನಿಗಾ ವಹಿಸಿವೆ.
ಅಸನ್ಸೆಲ್ನ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಬಾಸ್ಟಿನ್ ಬಜಾರ್ ಮಿಶ್ರ ವಸತಿ ಪ್ರದೇಶವಾಗಿದೆ. ಇಲ್ಲಿ ಅಲ್ಪಸಂಖ್ಯಾತ ಸಮುದಾಯದ ವ್ಯಾಪಾರಿಗಳ ಸಂಖ್ಯೆಯೂ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಕೇಂದ್ರ ಪಡೆಗಳನ್ನು ದೇಗುಲದ ಹೊರಗೆ ನಿಯೋಜಿಸಲಾಗಿದೆ.

