ಬೆಂಗಳೂರು, ಜೂ. 13 : ರಾಜ್ಯದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸರಕಾರಿ ಬಸ್ಗಳಲ್ಲಿ ಪ್ರಯಾಣಿಸುವ ಉಚಿತ ಬಸ್ ಪಾಸ್ ವಿತರಣೆ ಸಂಬಂಧ ಸರಕಾರದಿಂದ ಅನುಮೋದನೆ ದೊರೆತಿದ್ದು ಶುಕ್ರವಾರದಿಂದಲೇ ಆನ್ಲೈನ್ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಉಚಿತ ಬಸ್ ಪಾಸ್ ಪಡೆಯುವ ಪ್ರತಿ ವಿದ್ಯಾರ್ಥಿಗೂ ಅಪಘಾತ ವಿಮೆ ಇರಲಿದೆ. ಇಂತಹದ್ದೊಂದು ವಿನೂತನ ಪ್ರಯತ್ನ ಇದೇ ಮೊದಲು. ಇದಕ್ಕೆ ಪ್ರತಿ ತಿಂಗಳು ಪ್ರತಿ ವಿದ್ಯಾರ್ಥಿಗೆ 5 ರೂ. ಗಳ ಕಂತನ್ನು ಸರಕಾರವೇ ಪಾವತಿಸಲಿದೆ.
ಈ ಬಗ್ಗೆ ರಾಜ್ಯ ಸಾರಿಗೆ ಇಲಾಖೆ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಿದೆ. ಅದರಂತೆ ರಾಜ್ಯದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ವಿದ್ಯಾರ್ಥಿಗಳ ಉಚಿತ ಪಾಸ್ ವಿತರಣೆ ಸಂಬಂಧ ಹಾಲಿ ಇರುವ ನಿಯಮಾವಳಿಗಳ ಅನುಸರಿಸಲಾಗುತ್ತದೆ. ಅಂದರೆ, ವಿದ್ಯಾರ್ಥಿ ಪಾಸ್ಗಾಗಿ ಶೈಕ್ಷಣಿಕ ವಿದ್ಯಾಭ್ಯಾಸದ ಅರ್ಹತಾ ಮಾನದಂಡಗಳು, ದೂರದ ಮಿತಿ, ಪಾಸ್ನ ಕಾಲಾವಧಿಯಂತಹ ನಿಬಂಧನೆಗಳು ಅನ್ವಯವಾಗಲಿವೆ.
ವಿದ್ಯಾರ್ಥಿಗಳು ರಾಜ್ಯದ ಯಾವುದೇ ಸೈಬರ್ಸೆಂಟರ್, ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ನಾಡಕಚೇರಿಗಳ ಮೂಲಕ “ಸೇವಾಸಿಂಧು ಪೋರ್ಟಲ್ನಲ್ಲಿ ಲಾಗಿನ್ ಆಗಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಪ್ರಸಕ್ತ ಸಾಲಿನಲ್ಲಿ ಈಗಾಗಲೇ ವಿತರಿಸಲಾಗಿರುವ ಬಸ್ ಪಾಸ್ ಗಳನ್ನು ಬಳಸಿ ವಿದ್ಯಾರ್ಥಿಗಳು ಪ್ರಯಾಣಿಸಬಹುದಾಗಿದೆ. ಇದಕ್ಕಾಗಿ ಪಾವತಿಸಿರುವ ಸಂಪೂರ್ಣ ಹಣವನ್ನು ಮುಂದಿನ 15 ದಿನಗಳೊಳಗಾಗಿ ವಿದ್ಯಾರ್ಥಿಗಳಿಗೆ ಮರುಪಾವತಿಸಲಾಗುವುದು ಎಂದು ಸಾರಿಗೆ ಇಲಾಖೆ ತಿಳಿಸಿದೆ.
ಪ್ರಮುಖ ಅಂಶಗಳು:
ಪ್ರತಿ ಬಸ್ ಪಾಸ್ಗೆ ತಲಾ 100 ರೂ.ನಂತೆ ಸಂಸ್ಕರಣಾ ಶುಲ್ಕವನ್ನು ಸರಕಾರವೇ ನಿಗಮಗಳಿಗೆ ಭರಿಸಲಿದ್ದು ಈ ಅಪಘಾತ ಪರಿಹಾರ ನಿಧಿ ಮತ್ತು ಸಂಸ್ಕರಣೆಗೆ ತಗಲುವ ಸುಮಾರು 15 ಕೋ. ರೂ.ಗಳನ್ನು 4 ರಸ್ತೆ ಸಾರಿಗೆ ನಿಗಮಗಳಿಗೆ ಸರಕಾರ ಪಾವತಿಸಲಿದೆ.
ಪ್ರಸ್ತುತ ರಾಜ್ಯದ 4 ಸಾರಿಗೆ ಸಂಸ್ಥೆಗಳಿಂದ 19,792 ವಿದ್ಯಾರ್ಥಿಗಳು ನಿಗದಿತ ಶುಲ್ಕ ಪಾವತಿಸಿ ಬಸ್ ಪಾಸ್ ಖರೀದಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಮುಂದಿನ 15 ದಿನಗಳಲ್ಲಿ ಈ ಹಣವನ್ನು ಮರುಪಾವತಿ ಮಾಡಲಾಗುತ್ತದೆ
ವಿದ್ಯಾರ್ಥಿಗಳ ಉಚಿತ ಬಸ್ ಪಾಸ್ ವಿತರಣೆಗೆ ವಾರ್ಷಿಕ 286.08 ಕೋ. ರೂ. ವೆಚ್ಚ ನಿರೀಕ್ಷೆ ಇದೆ. ಇದನ್ನು ಸರಕಾರ ಭರಿಸಲಿದೆ.
ರಾಜ್ಯದಲ್ಲಿ ವಾಸವಿದ್ದು, ನೆರೆ ರಾಜ್ಯಗಳ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಮತ್ತು ನೆರೆ ರಾಜ್ಯಗಳಲ್ಲಿ (ರಾಜ್ಯದ ಗಡಿಭಾಗಗಳಲ್ಲಿ) ವಾಸವಿದ್ದು ರಾಜ್ಯದೊಳಗಿರುವ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೂ ಈ ಉಚಿತ ಬಸ್ ಪಾಸ್ ಲಭ್ಯವಿರಲಿದೆ.


