ದಾವಣಗೆರೆ, ಜೂ. 9 : ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಮಾನವೀಯತೆಯೇ ತಲೆತಗ್ಗಿಸುವಂತಹ ಘಟನೆಯೊಂದು ನಡೆದಿದ್ದು ತವರು ಮನೆಗೆ ಹೊರಟಿದ್ದ ಒಂಟಿ ಮಹಿಳೆಯೊಬ್ಬರಿಗೆ ಮದ್ಯ ಕುಡಿಸಿ ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿರುವ ಭೀಕರ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯ ಯಲೋದಹಳ್ಳಿ ಗ್ರಾಮದಲ್ಲಿ ಪತಿಯೊಂದಿಗೆ ಜಗಳವಾಡಿಕೊಂಡು ತವರು ಮನೆಗೆ ಒಬ್ಬಳ್ಳೇ ನಡೆದು ಹೋಗುವಾಗ 10 ಮಂದಿ ಕಾಮುಕರು ಈ ಕೃತ್ಯ ಎಸಗಿರುವುದು ತಿಳಿದುಬಂದಿದೆ.
ಏನಿದು ಘಟನೆ?
ಈ ಕುರಿತು ನೀಡಲಾಗಿರುವ ದೂರಿನ ಅನ್ವಯ, ಸಂತ್ರಸ್ತೆ 40 ವರ್ಷದ ವಿವಾಹಿತ ಮಹಿಳೆಯಾಗಿದ್ದು, ಇವರಿಗೆ 2 ಮಕ್ಕಳಿದ್ದಾರೆ. ಇದೇ ತಿಂಗಳ ಜೂನ್.4ರಂದು ಮದ್ಯವ್ಯಸನಿಯಾಗಿದ್ದ ಪತಿಯೊಂದಿಗೆ ಜಗಳವಾಡಿಕೊಂಡಿದ್ದು, ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮನನೊಂದ ಮಹಿಳೆ ತನ್ನ ತವರು ಮನೆಗೆ ನಡೆದುಕೊಂಡು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಒಂಟಿಯಾಗಿದ್ದ ಮಹಿಳೆಯನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ತಂಡ, ಬಲವಂತವಾಗಿ ಮದ್ಯ ಕುಡಿಸಿ ಆಕೆಗೆ ಅಮಲೇರುವಂತೆ ಮಾಡಿದ್ದಾರೆ. ಹೀಗೆ ಆಕೆ ಅರೆ ಪ್ರಜ್ಞಾಹೀನ ಸ್ಥಿತಿಯಲ್ಲಿರುವಾಗ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದು, ಮಹಿಳೆಯ ಮೇಲೆ 10 ಮಂದಿ ದುರುಳರು ಕ್ರೂರವಾಗಿ ಸಾಮೂಹಿಕ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಆರೋಪಿಗಳು ಅರೆಸ್ಟ್!
ಈ ಭೀಕರ ಘಟನೆ ಜೂನ್.04ರಂದು ನಡೆದಿದ್ದು, ಘಟನೆಯಿಂದ ಆಘಾತ ಮತ್ತು ತೀವ್ರ ಭಯಭೀತಳಾಗಿದ್ದ ಆಕೆ ಕೊನೆಗೆ ಜೂನ್.09ರಂದು ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಘಟನೆಯ ಗಂಭೀರತೆಯನ್ನು ಅರ್ಥಮಾಡಿಕೊಂಡ ಪೊಲೀಸರು ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕಾರ್ಯಪ್ರವೃತ್ತರಾದ ಪೊಲೀಸರು ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಎಲ್ಲಾ 10 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಘಟನೆ ಕುರಿತು ಪೊಲೀಸರು ಆರೋಪಿಗಳ ತೀವ್ರ ವಿಚಾರಣೆ ನಡೆಸುತ್ತಿದ್ದು, ಘಟನಾ ಸ್ಥಳದ ಮಹಜರು ಪ್ರಕ್ರಿಯೆ ಹಾಗೂ ತನಿಖೆಯನ್ನು ಚುರುಕುಗೊಳಿಸಿದ್ದಾರೆ.


