ಬೆಂಗಳೂರು, ಆ. 29 : ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಮೂಲಕ ನಡೆದ ಸಹಾಯಕ ಕಾರ್ಯಪಾಲಕ ಎಂಜಿನಿಯರ್(ಎಇಇ) ಗ್ರೇಡ್ 1 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಶಾಮೀಲಾಗಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಈ ಅಕ್ರಮ ನೇಮಕಾತಿಗೆ ಸಚಿವರೇ ಜವಾಬ್ದಾರ ಎಂದು ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ. 2022ರಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಪಾಲ ಎಂಜಿನಿಯರ್ ಗ್ರೇಡ್-1ರ 25 ಹುದ್ದೆಗಳಿಗೆ ಕೆಪಿಎಸ್ಸಿ ಮೂಲಕ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿತ್ತು. 2023ರಲ್ಲಿ ಪರೀಕ್ಷೆ ನಡೆದು 24 ಹುದ್ದೆಗಳಿಗೆ ಅಂತಿಮ ಆಯ್ಕೆಯ ತಾತ್ಕಾಲಿಕ ಪಟ್ಟಿ ಪ್ರಕಟಿಸಿ ಆಕ್ಷೇಪಣೆಗಳನ್ನು ಆಹ್ವಾನಿಸಲಾಯಿತು. ಆನಂದ್ ಎಸ್. ಸಿದ್ದಾರೆಡ್ಡಿ ಎನ್ನುವವರು ಮೂಲಕ ದೂರು ಸಲ್ಲಿಸಿದರು. ಉಳಿಕೆ ವೃಂದದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಒಟ್ಟು 10 ಒಎಂಆರ್ ಶೀಟ್ ತಿದ್ದಿದ್ದಾರೆ ಎಂದು ದೂರಿದ್ದರು.
ಸೂಕ್ತ ದಾಖಲೆಗಳನ್ನು ಕಲೆ ಹಾಕುವಂತೆ ಕಾರ್ಯದರ್ಶಿಗೆ ಆಯೋಗ ಸೂಚಿಸಿತು. 2 ಉಪಸಮಿತಿ ರಚಿಸಲಾಯಿತು. ಈ ಸಮಿತಿಯು 40 ಸಭೆ ನಡೆಸಿ 10 ಅಭ್ಯರ್ಥಿಗಳ ವಿರುದ್ಧದ ಆರೋಪಗಳನ್ನು ಪರಿಶೀಲಿಸಿ, ಶೀಟ್ಗಳನ್ನು ತಿದ್ದಿರುವುದನ್ನು ಖಚಿತಪಡಿಸಿಕೊಂಡು, ಆರೋಪಿತ 10 ಅಭ್ಯರ್ಥಿಗಳ ಆಯ್ಕೆಯನ್ನು ರದ್ದುಪಡಿಸಬೇಕೆಂದು ಶಿಫಾರಸು ಮಾಡಿತು. ಈ ಕುರಿತು ನ್ಯಾಯಾಲಯವೂ ಆಕ್ಷೇಪಣೆ ವ್ಯಕ್ತಪಡಿಸಿದರೂ ಎಲ್ಲ 24 ಅಭ್ಯರ್ಥಿಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ತರಾತುರಿಯಲ್ಲಿ ನೇಮಕಾತಿ ಪತ್ರ ನೀಡಿದ್ದಾರೆ ಎಂದರು.




