ಉಡುಪಿ : 11 ವರ್ಷಗಳ ಬಳಿಕ ಮತ್ತೆ ಮುನ್ನೆಲೆಗೆ ಬಂದ ಹೇಮಂತ್ ಪೂಜಾರಿ – ಡೇವಿಡ್ ಡಿಸೋಜಾ ಕೊಲೆ ತನಿಖೆಯಲ್ಲಿ ಅಂಡರ್‌ವರ್ಲ್ಡ್ ನಂಟು ಬಯಲು !

Advertisement

ಉಡುಪಿ, ಆ. 26 : ಉಡುಪಿ ಜಿಲ್ಲೆಯ ಪ್ರಮುಖ ಕೊಲೆ ಪ್ರಕರಣವೊಂದರಲ್ಲಿ ಇತ್ತೀಚೆಗೆ ನಡೆದ ಬಂಧನಗಳ ಬೆನ್ನಲ್ಲೇ ಕರಾವಳಿ ಜಿಲ್ಲೆಗಳ ಅಪರಾಧ ಇತಿಹಾಸದಲ್ಲಿ ಅಂಡರ್‌ವರ್ಲ್ಡ್ ನಂಟು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಮುದರಂಗಡಿ ಮೂಲದ ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಅಂಡರ್‌ವರ್ಲ್ಡ್ ಡಾನ್ ಛೋಟಾ ರಾಜನ್‌ನ ಆಪ್ತ ಸಹಚರ ಎಂದು ಹೇಳಲಾಗಿರುವ ಹೇಮಂತ್ ಪೂಜಾರಿ ಹೆಸರು ಮತ್ತೆ ಕೇಳಿಬಂದಿದೆ.

Advertisement

ಡೇವಿಡ್ ಡಿಸೋಜಾ ಕೊಲೆ ಪ್ರಕರಣದ ತನಿಖೆ ಹೇಮಂತ್ ಪೂಜಾರಿಯ ಸಹೋದರ ಕಿಶೋರ್ ಪೂಜಾರಿ ಕಡೆಗೆ ತಿರುಗಿದ್ದು, ಕೊಲೆ ಕಾರ್ಯಾಚರಣೆಗೆ ಅಗತ್ಯವಿದ್ದ ಹಣವನ್ನು ಆತ ಒದಗಿಸಿದ್ದಾನೆ ಎಂದು ಆರೋಪಿಸಲಾಗಿದೆ. ಪಡುಬಿದ್ರಿಯ ಯುಪಿಸಿಎಲ್‌ನಲ್ಲಿ ಗುತ್ತಿಗೆ ಪಡೆಯಲು ಕಿಶೋರ್ ರಾಮ ಪೂಜಾರಿ ಪ್ರಯತ್ನಿಸಿದ್ದ ಎನ್ನಲಾಗಿದ್ದು, ಆ ಗುತ್ತಿಗೆ ಬಳಿಕ ಡೇವಿಡ್ ಡಿಸೋಜಾ ಅವರಿಗೆ ದೊರೆತಿತ್ತು ಎಂದು ತಿಳಿದುಬಂದಿದೆ.

Advertisement

ಒಂದು ಕಾಲದಲ್ಲಿ ಮುಂಬೈ ಅಂಡರ್‌ವರ್ಲ್ಡ್‌ನಲ್ಲಿ ಭೀತಿ ಮೂಡಿಸಿದ್ದ ಹಾಗೂ ಕಳೆದ ಒಂದು ದಶಕದಿಂದ ಮೃತಪಟ್ಟಿದ್ದಾನೆ ಎಂದು ನಂಬಲಾಗಿದ್ದ ಕುಖ್ಯಾತ ಗ್ಯಾಂಗ್‌ಸ್ಟರ್ ಹೇಮಂತ್ ಪೂಜಾರಿ (ಹೆಚ್‌ಪಿ- ಹೇಮಂತ್ ಪೂಜಾರಿ) ಇದೀಗ ಮತ್ತೆ ಮುನ್ನೆಲೆಗೆ ಬಂದಿರುವ ಶಂಕೆ ವ್ಯಕ್ತವಾಗಿದೆ.

ಕರಾವಳಿಯ ಮುದರಂಗಡಿಯಲ್ಲಿ ಉದ್ಯಮಿ ಡೇವಿಡ್ ಹತ್ಯೆಗೀಡಾದ ಇತ್ತೀಚಿನ ಘಟನೆ ಇಡೀ ರಾಜ್ಯ ಮಾತ್ರವಲ್ಲದೆ ಮುಂಬೈ ಪೊಲೀಸರನ್ನೂ ಬೆಚ್ಚಿಬೀಳಿಸಿದೆ. ಆಗಸ್ಟ್ 7ರಂದು ಉಡುಪಿ ಜಿಲ್ಲೆಯ ಮುದರಂಗಡಿಯಲ್ಲಿ ಉದ್ಯಮಿ ಡೇವಿಡ್ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು, ಅಂಡರ್‌ವರ್ಲ್ಡ್ ನಂಟಿನ ಆರೋಪಗಳನ್ನು ಪತ್ತೆಹಚ್ಚಿದ್ದಾರೆ. ಇದೇ ವೇಳೆ ಹೇಮಂತ್ ಪೂಜಾರಿ ಅವರದ್ದು ಎನ್ನಲಾಗಿರುವ ಆಡಿಯೋ ಕ್ಲಿಪ್‌ಗಳು ಕೂಡ ಬೆಳಕಿಗೆ ಬಂದಿದೆ.

ಆಡಿಯೋ ಕ್ಲಿಪ್‌ಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕರೆಗಳನ್ನು ಸ್ವತಃ ಹೇಮಂತ್ ಪೂಜಾರಿ ಮಾಡಿದ್ದಾನೆಯೇ ಅಥವಾ ಆತನ ಹೆಸರನ್ನು ಬಳಸಿಕೊಂಡು ಬೇರೊಬ್ಬ ವ್ಯಕ್ತಿ ಮಾಡಿದ್ದಾನೆಯೇ ಎಂಬುದು ಇನ್ನೂ ದೃಢಪಟ್ಟಿಲ್ಲ.

ಯುಪಿಸಿಎಲ್ ಅಧಿಕಾರಿಗಳು ಹಾಗೂ ಮೃತ ಡೇವಿಡ್ ಡಿಸೋಜಾ ಅವರಿಗೆ ಹೇಮಂತ್ ಪೂಜಾರಿ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬರು ದೂರವಾಣಿ ಕರೆ ಮಾಡಿ, ಗುತ್ತಿಗೆಯನ್ನು ಕಿಶೋರ್ ಪೂಜಾರಿಗೆ ನೀಡುವಂತೆ ಒತ್ತಾಯಿಸಿದ್ದ ಎಂದು ಉಡುಪಿ ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ.

ಅದೇ ವ್ಯಕ್ತಿ ಪ್ರಕರಣದ ಇತರ ಆರೋಪಿಗಳಾದ ಚಿರಾಗ್ ಪೂಜಾರಿ, ಸದಾನಂದ ದೇವಾಡಿಗ ಹಾಗೂ ಕಿಶೋರ್ ಪೂಜಾರಿ ಮತ್ತು ಶೂಟರ್‌ಗಳಾದ ರಾಜು, ಅನ್ಮೋಲ್ ರಸ್ತೋಗಿ ಹಾಗೂ ಜಿಯಾವುಲ್ ಶೇಖ್ ಅವರೊಂದಿಗೆ ಸಂಪರ್ಕದಲ್ಲಿದ್ದು, ಕಾರ್ಯಾಚರಣೆಯನ್ನು ಸಮನ್ವಯಗೊಳಿಸಿದ್ದಾನೆ ಎನ್ನಲಾಗಿದೆ. ಪ್ರಕರಣದಲ್ಲಿ ಆತನ ಪಾತ್ರ ಇರುವುದು ಸ್ಪಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೇಮಂತ್ ಪೂಜಾರಿ ಮುಂಬೈ ಅಂಡರ್‌ವರ್ಲ್ಡ್‌ನಲ್ಲಿ ಸಕ್ರಿಯನಾಗಿದ್ದ. ಆದರೆ ಕಳೆದ 10 ವರ್ಷಗಳಿಂದ ಯಾವುದೇ ಅಪರಾಧ ಚಟುವಟಿಕೆಯಲ್ಲಿ ಆತನ ಸುಳಿವು ಪತ್ತೆಯಾಗಿರಲಿಲ್ಲ. 2011ರ ಮಾರ್ಚ್‌ನಲ್ಲಿ ಮುಂಬೈನ ಗೋರೆಗಾಂವ್‌ನಲ್ಲಿ 75 ವರ್ಷದ ಬೇಕರಿ ಮಾಲೀಕ ಅಂಗಾರ ಪೂಜಾರಿ ಅವರನ್ನು ಹಫ್ತಾ ಹಣದ ವಿಚಾರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಿದ ಬಳಿಕ ಹೇಮಂತ್ ಪೂಜಾರಿ ಹೆಸರು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು.

2011ರ ಬಳಿಕ ಹೇಮಂತ್ ಪೂಜಾರಿ ಮೌನವಾಗಿದ್ದ ಹಾಗೂ ಯಾವುದೇ ಅಪರಾಧ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರಲಿಲ್ಲ. 2013ರಲ್ಲಿ ವಿದೇಶವೊಂದರಲ್ಲಿ ಆತ ಮೃತಪಟ್ಟಿದ್ದಾನೆ ಅಥವಾ ಹತ್ಯೆಯಾಗಿದ್ದಾನೆ ಎಂಬ ವರದಿಗಳೂ ಹರಿದಾಡಿದ್ದವು. ಬಳಿಕ ಭಾರತೀಯ ತನಿಖಾ ಸಂಸ್ಥೆಗಳ ಗಮನಕ್ಕೂ ಬಾರದಂತೆ ಆತ ಸಂಪೂರ್ಣವಾಗಿ ನಾಪತ್ತೆಯಾಗಿದ್ದ.

ಆದರೆ, 11 ವರ್ಷಗಳ ಬಳಿಕ ಉಡುಪಿಯ ಮುದರಂಗಡಿ ಗುಂಡಿನ ದಾಳಿ ಪ್ರಕರಣದ ಮೂಲಕ ‘ಹೆಚ್‌ಪಿ’ ಎಂಬ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಇದು ಕರಾವಳಿ ಭಾಗದ ಉದ್ಯಮಿಗಳಲ್ಲಿ ಆತಂಕ ಮೂಡಿಸಿದೆ. ಆಡಿಯೋ ಕ್ಲಿಪ್‌ನಲ್ಲಿರುವ ಧ್ವನಿ ಹೇಮಂತ್ ಪೂಜಾರಿಯದ್ದೇ ಎಂಬುದು ದೃಢಪಟ್ಟರೆ, ಭಾರತೀಯ ಅಂಡರ್‌ವರ್ಲ್ಡ್‌ನ ಕರಾಳ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಅಧ್ಯಾಯ ತೆರೆದುಕೊಳ್ಳುವ ಸಾಧ್ಯತೆಯಿದೆ.

ಕರಾವಳಿ ಹಾಗೂ ಮುಂಬೈನ ಹಲವು ಹೋಟೆಲ್ ಉದ್ಯಮಿಗಳಿಗೂ ಹೇಮಂತ್ ಪೂಜಾರಿ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದಿವೆ ಎನ್ನಲಾಗಿದೆ. ಈ ಬಗ್ಗೆ ಮುಂಬೈ ಪೊಲೀಸರು ಕೂಡ ತನಿಖೆ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ.

ಹೇಮಂತ್ ಪೂಜಾರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಖಾರ್ ರೈಲು ನಿಲ್ದಾಣದ ಸಮೀಪದ ಆಮಂತ್ರಣ್ ಬಾರ್ ಮಾಲೀಕ ಹಾಗೂ ಹೋಟೆಲ್ ಉದ್ಯಮಿ ರತ್ನಾಕರ್ ಶೆಟ್ಟಿ ಅವರ 2001ರ ಡಿಸೆಂಬರ್ 21ರ ಹತ್ಯೆ, ನಾನಾ ಚೌಕ್‌ನ ಗೋಲ್ಡನ್ ಕ್ರೌನ್ ಹೋಟೆಲ್ ಮಾಲೀಕ ಜೈ ಶೆಟ್ಟಿ ಅವರ 2001ರ ಮೇ 4ರ ಹತ್ಯೆ, ಮಿಲನ್ ಸಬ್‌ವೇ ಸಮೀಪ ಹೋಟೆಲ್ ಉದ್ಯಮಿ ಮೊಹಮ್ಮದ್ ಶಫಿ ಅವರ 2001ರ ಏಪ್ರಿಲ್ 4ರ ಹತ್ಯೆ ಸೇರಿದಂತೆ ಡೋಂಗ್ರಿಯಲ್ಲಿ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಅಕ್ಬರ್ ಖಾನ್ ಹಾಗೂ ಖಾರ್‌ನ ಹೂವಿನ ವ್ಯಾಪಾರಿ ಸುನಿಲ್ ಸೋಹನ್ಸ್ ಹತ್ಯೆ ಪ್ರಕರಣಗಳೂ ಸೇರಿವೆ.

ಕಾರ್ಡಿನಲ್ ಗ್ರೇಸಿಯಸ್ ಹೈಸ್ಕೂಲ್‌ನಲ್ಲಿ 12ನೇ ತರಗತಿ ಪೂರ್ಣಗೊಳಿಸದೆ ಶಿಕ್ಷಣ ತೊರೆದಿದ್ದ ಹೇಮಂತ್ ಪೂಜಾರಿ, ಖಾರ್‌ನ ನಿರ್ಮಲ್ ನಗರ ಕೊಳೆಗೇರಿಯಲ್ಲಿ ಬೆಳೆದಿದ್ದ. ಆರಂಭದಲ್ಲಿ ಘಾಟ್‌ಕೋಪರ್‌ನಲ್ಲಿ ವೇಟರ್ ಆಗಿ ಕೆಲಸ ಮಾಡುತ್ತಿದ್ದ. ಬಳಿಕ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯರ ಸಂಪರ್ಕಕ್ಕೆ ಬಂದ ಆತ ಶೂಟರ್ ಆಗಿ ಗ್ಯಾಂಗ್‌ನಲ್ಲಿ ತನ್ನ ಸ್ಥಾನವನ್ನು ಹೆಚ್ಚಿಸಿಕೊಂಡಿದ್ದ.

1999ರ ನವೆಂಬರ್‌ನಲ್ಲಿ ಖಾರ್‌ನಲ್ಲಿ ಬಿಲ್ಡರ್ ಶೌಕತ್ ಸರ್ಕಾರ್ ಹತ್ಯೆಯ ಬಳಿಕ ಪೂಜಾರಿ ಮೊದಲ ಬಾರಿಗೆ ಕುಖ್ಯಾತಿ ಗಳಿಸಿದ್ದ. ನಂತರ ರಾಜನ್‌ನ ಪ್ರಮುಖ ತಂಡದ ಸದಸ್ಯನಾದ ಆತ, 2002ರ ಸುಮಾರಿಗೆ ರಾಜನ್‌ನಿಂದ ಬೇರ್ಪಟ್ಟು ತನ್ನದೇ ಗ್ಯಾಂಗ್ ಕಟ್ಟಿಕೊಂಡಿದ್ದಾನೆ ಎನ್ನಲಾಗಿದೆ.

ಆಡಿಯೋ ಕ್ಲಿಪ್‌ನಲ್ಲಿ ಕೇಳಿಬರುವ ವ್ಯಕ್ತಿ ನಿಜವಾಗಿಯೂ ಹೇಮಂತ್ ಪೂಜಾರಿಯೇ ಎಂಬುದು ದೃಢಪಟ್ಟರೆ, ಡೇವಿಡ್ ಡಿಸೋಜಾ ಕೊಲೆ ಪ್ರಕರಣದಲ್ಲಿ ಮತ್ತೊಂದು ಪ್ರಮುಖ ಹೆಸರು ಹೊರಹೊಮ್ಮುವ ಸಾಧ್ಯತೆಯಿದೆ. ಇದರಿಂದ ಕರಾವಳಿ ಭಾಗದ ಅಪರಾಧ ಜಾಲಕ್ಕೂ ಮುಂಬೈ ಅಂಡರ್‌ವರ್ಲ್ಡ್‌ಗೂ ಇರುವ ಶಂಕಿತ ನಂಟು ಮತ್ತಷ್ಟು ಬಲಗೊಳ್ಳಬಹುದು.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಗಣೇಶೋತ್ಸವ ಹಿನ್ನೆಲೆ ಶಾಂತಿ ಸಭೆ : ನಿಯಮ ಮೀರಿದರೆ ಅನುಮತಿ ರದ್ದು – ಕಾನೂನು ಕ್ರಮದ ಎಚ್ಚರಿಕೆ

ಕರಾವಳಿ, ಟಾಪ್ ಸುದ್ದಿಗಳು

ಕಾಸರಗೋಡು : ಜಿಂಕೆ ಬೇಟೆಯಾಡಿ ಮಾಂಸ ಸಾಗಿಸುತ್ತಿದ್ದ ಆರೋಪ – ಓರ್ವನ ಬಂಧನ

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಮನೆಯ ಬಾವಿಗೆ ಹಾರಿ ಯುವತಿ ಆತ್ಮಹತ್ಯೆ