ಬೆಂಗಳೂರು, ಮಾ. 10 : ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಣಾಮ ಬೆಂಗಳೂರು, ಚೆನ್ನೈ ಮತ್ತು ಮುಂಬೈನಲ್ಲಿರುವ ಹೋಟೆಲ್ ಮತ್ತು ರೆಸ್ಟೋರೆಂಟ್ ಉದ್ಯಮ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ಗಳ ಕೊರತೆಯನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇಂದ್ರವು ತೈಲ ಸಂಸ್ಕರಣಾ ಘಟಕಗಳಿಗೆ ದ್ರವೀಕೃತ ಪೆಟ್ರೋಲಿಯಂ ಅನಿಲ (ಎಲ್ಪಿಜಿ) ಉತ್ಪಾದನೆಯನ್ನು ಹೆಚ್ಚಿಸಲು ಆದೇಶಿಸಿದೆ ಎಂದು ವರದಿ ತಿಳಿಸಿದೆ.
ಇರಾನ್-ಇಸ್ರೇಲ್-ಯುದ್ಧ ಮತ್ತು ಹಾರ್ಮುಜ್ ಜಲಸಂಧಿ ಸೇರಿದಂತೆ ಪ್ರಮುಖ ಇಂಧನ ಹಡಗು ಸಂಚಾರ ಮಾರ್ಗಗಳಲ್ಲಿ ಉಂಟಾದ ಅಡ್ಡಿಯಿಂದಾಗಿ ಕಳೆದ ಶನಿವಾರ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಹೆಚ್ಚಳವಾಗಿದೆ. ಗೃಹಬಳಕೆಯ ಅಡುಗೆ ಅನಿಲದ ದರವನ್ನು 60 ರೂ. ಮತ್ತು ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ದರವನ್ನು 115 ರೂಪಾಯಿ ಹೆಚ್ಚಿಸಲಾಗಿದೆ. ಮಾರ್ಚ್ 10 ರಿಂದ ನಗರದಾದ್ಯಂತ ಹೋಟೆಲ್ ಮತ್ತು ರೆಸ್ಟೋರೆಂಟ್ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಬೆಂಗಳೂರು ಹೋಟೆಲ್ಗಳ ಸಂಘ ಸೋಮವಾರ ತಿಳಿಸಿತ್ತು.
“ಅನಿಲ ಪೂರೈಕೆ ಸ್ಥಗಿತಗೊಂಡಿರುವುದರಿಂದ, ನಾಳೆ(ಮಾ. 10)ಯಿಂದ ಹೋಟೆಲ್ಗಳು ಬಂದ್ ಆಗಲಿದೆ” ಎಂದು ಸಂಘವು ಹೇಳಿಕೆ ನೀಡಿರುವುದಾಗಿ ವರದಿಯಾಗಿದೆ. ಇದರ ಜೊತೆಗೆ, ಅನಿಲ ಪೂರೈಕೆ ಸಾಮಾನ್ಯ ಸ್ಥಿತಿಗೆ ಮರಳುವವರೆಗೆ ನಮ್ಮ ಹೋಟೆಲ್ ಉದ್ಯಮವು ಸಹ ತೊಂದರೆಗಳನ್ನು ಎದುರಿಸಬೇಕಾಗುತ್ತದೆ” ಎಂದು ಅದು ಹೇಳಿದೆ. ತೈಲ ಕಂಪನಿಗಳು 70 ದಿನಗಳವರೆಗೆ ನಿರಂತರ ಅನಿಲ ಪೂರೈಕೆಯನ್ನು ಖಚಿತಪಡಿಸಿತ್ತು. ಆದರೆ ಹಠಾತ್ ಗ್ಯಾಸ್ ಸಿಲಿಂಡರ್ ಪೂರೈಕೆ ನಿಲುಗಡೆ ಹೋಟೆಲ್ ಉದ್ಯಮಕ್ಕೆ “ದೊಡ್ಡ ಹೊಡೆತ”ವಾಗಿದೆ ಎಂದು ಸಂಘ ಹೇಳಿದೆ.

