ಬೆಂಗಳೂರಿನಲ್ಲಿ LPG ವ್ಯತ್ಯಯ: ಹೋಟೆಲ್‌ಗಳ ಮೆನುವಿಂದ ದೋಸೆ ಕಟ್! ಸ್ಟಾರ್‌ ಹೋಟೆಲ್‌ನಲ್ಲೂ ಸೌದೆ ಒಲೆಯಲ್ಲಿ ಅಡುಗೆ!

ಬೆಂಗಳೂರು, ಮಾ. 11 : ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ವಾಣಿಜ್ಯ ಬಳಕೆಯ ಅಡುಗೆ ಅನಿಲ (ಎಲ್‌ಪಿಜಿ) ಸಿಲಿಂಡರ್‌ಗಳ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ಇದರ ಪರಿಣಾಮ ಬೆಂಗಳೂರಿನಲ್ಲಿ ಹೋಟೆಲ್‌ ಹಾಗೂ ರೆಸ್ಟೋರೆಂಟ್‌ ಉದ್ಯಮಗಳು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಗ್ಯಾಸ್‌ ಪೂರೈಕೆ ಸರಿಯಾಗಲಿಲ್ಲ ಎಂದರೆ ವೆರೈಟಿ ಫುಡ್‌ನ ಮೆನು ಕಡಿತಕ್ಕೆ ಹೋಟೆಲ್‌ಗಳು ಚಿಂತನೆ ನಡೆಸಿವೆ. ಹೆಚ್ಚು ಗ್ಯಾಸ್‌ ಬಳಕೆಯಾಗುವ ಆಹಾರ ಕೈ ಬಿಡಲು ನಿರ್ಧಾರ ಮಾಡಲಾಗಿದೆ. ಬೆಂಗಳೂರಿನ ಎಲ್ಲಾ ಹೋಟೆಲ್‌ಗಳಲ್ಲಿ ಮೆನು ಇಳಿಕೆಗೆ ಚಿಂತನೆ ನಡೆಸಲಾಗಿದ್ದು ಈ ಸಂಕಷ್ಟದಿಂದ ಪಾರಾಗಲು ಸ್ಟಾರ್ ಹೋಟೆಲ್ ಗಳಲ್ಲೂ ಸೌದೆ ಒಲೆಯ ಬಳಕೆ ಪ್ರಾರಂಭಿಸಲಾಗಿದೆ.

ಬೆಂಗಳೂರಿನ ಸ್ಟಾರ್‌ ಹೋಟೆಲ್‌ ಒಂದು ಮಂಗಳವಾರ ಸೌದೆ ಒಲೆಯಲ್ಲಿ ಅಡುಗೆ ತಯಾರಿಸಿದ ಪ್ರಸಂಗ ಕಂಡು ಬಂತು. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಎರಡು ದಿನಗಳಲ್ಲಿ ಹೋಟೆಲ್‌ಗಳನ್ನು ಮುಚ್ಚುವ ಪರಿಸ್ಥಿತಿ ಎದುರಾಗಬಹುದು. ಹೀಗಾಗಿ, ಸಮಸ್ಯೆ ಬಗೆಹರಿಸುವಂತೆ ಕೇಂದ್ರ ಸರಕಾರಕ್ಕೆ ಹೋಟೆಲ್‌ ಮಾಲೀಕರು ಪತ್ರ ಬರೆದು ಒತ್ತಾಯಿಸಿದ್ದಾರೆ.

ಗೃಹಬಳಕೆ, ವಾಣಿಜ್ಯ ಸಿಲಿಂಡರ್‌ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಇದರಿಂದ ಬೆಂಗಳೂರಿನ ಹೋಟೆಲ್‌ ಉದ್ಯಮಕ್ಕೂ ದೊಡ್ಡ ಹೊಡೆತ ಬಿದ್ದಿದೆ. ಕೆಲವು ಹೋಟೆಲ್‌ಗಳಲ್ಲಿ ದೋಸೆ ಮಾಡಲು ಹೆಚ್ಚು ಗ್ಯಾಸ್‌ ಬೇಕಾಗುತ್ತದೆ ಎಂಬ ಕಾರಣದಿಂದ ದೋಸೆ ಮಾಡುವುದನ್ನೇ ನಿಲ್ಲಿಸಲಾಗಿದೆ. ಇನ್ನೂ ಕೆಲವೆಡೆ ಕಾಫಿ-ಟೀಗೆ ಇಂಡಕ್ಷನ್‌ ಪಾತ್ರೆಗಳನ್ನು ಖರೀದಿಸುತ್ತಿದ್ದಾರೆ. ಕೆಲವು ಸಣ್ಣ ಪುಟ್ಟ ಹೋಟೆಲ್‌ಗಳಲ್ಲಿ ಸೌದೆ ಒಲೆಗಳಲ್ಲಿ ಅಡುಗೆ ಮಾಡಲಾರಂಭಿಸಿದ್ದಾರೆ.

ಬೆಂಗಳೂರಿನಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಹೋಟೆಲ್‌ಗಳಿವೆ. ಪ್ರತಿ ಹೋಟೆಲ್‌ಗೆ ನಿತ್ಯ ಸುಮಾರು 4 ಸಿಲಿಂಡರ್‌ಗಳು ಬೇಕು. ರಾಜ್ಯಾದ್ಯಂತ ಸುಮಾರು ಒಂದು ಲಕ್ಷಕ್ಕೂ ಅಕ ಹೋಟೆಲ್‌ಗಳಿವೆ. ಅಡುಗೆ ಅನಿಲದ ಕೊರತೆ ಹೀಗೆಯೇ ಮುಂದುವರಿದರೆ ಹಂತ ಹಂತವಾಗಿ ಹಲವು ಹೋಟೆಲ್‌ಗಳು ಸೇವೆ ನಿಲ್ಲಿಸುವುದು ಅನಿವಾರ್ಯವಾಗುತ್ತದೆ. ಜತೆಗೆ, ಹಾಲು, ತರಕಾರಿ, ದಿನಸಿ ಸೇರಿದಂತೆ ಹೋಟೆಲ್‌ ಉದ್ಯಮಕ್ಕೆ ಪೂರಕವಾದ ಪದಾರ್ಥಗಳ ಬಳಕೆಯ ಮೇಲೂ ಪರಿಣಾಮ ಬೀರುತ್ತದೆ. ಹೀಗಾಗಿ, ಹಲವು ಡೀಲರ್‌ಗಳು ದಾಸ್ತಾನು ಮಾಡಿರುವ ಅಡುಗೆ ಅನಿಲದ ಸಿಲಿಂಡರ್‌ಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಹೋಟೆಲ್‌ ಮಾಲೀಕರು ಆಗ್ರಹಿಸಿದ್ದಾರೆ.

ಗ್ಯಾಸ್‌ ಸಿಲಿಂಡರ್‌ ಇಲ್ಲದೆ ಹೋಟೆಲ್‌ ನಡೆಸುವುದು ಅಸಾಧ್ಯ. ಕೇಂದ್ರ ಸರಕಾರವು 60-70 ದಿನಗಳ ದಾಸ್ತಾನು ಇದೆ ಎಂದು ಈ ಹಿಂದೆ ಹೇಳಿತ್ತು. ಇದೀಗ ವಾಣಿಜ್ಯ ಬಳಕೆಯ ಸಿಲಿಂಡರ್‌ ಪೂರೈಕೆ ನಿಲ್ಲಿಸಿರುವುದು ಆತಂಕ ಮೂಡಿಸಿದೆ. ಅನಿಲ ಸರಬರಾಜು ಸಹಜ ಸ್ಥಿತಿಗೆ ಬರುವವರೆಗೆ ಹೋಟೆಲ್‌ ಉದ್ಯಮವು ಹಲವು ಸಂಕಷ್ಟಗಳನ್ನು ಎದುರಿಸಬಹುದು ಎಂದು ಬೆಂಗಳೂರು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್‌ ತಿಳಿಸಿದರು.

ಗ್ರಾಹಕರ ಪ್ರಮಾಣದಲ್ಲಿ ಇಳಿಕೆ

Advertisement


ದೋಸೆ, ಗೋಬಿಮಂಚೂರಿಯಂತಹ ಕೆಲವು ಪದಾರ್ಥಗಳನ್ನು ತಯಾರಿಸದಿರಲು ನಿರ್ಧರಿಸಲಾಗಿದೆ. ಶೇ.10ರಷ್ಟು ಗ್ರಾಹಕರು ಕಡಿಮೆಯಾಗಿದ್ದಾರೆ. ಪದಾರ್ಥಗಳ ಪ್ರಮಾಣವೂ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿದಿನ ಬಳಕೆಯ ವಸ್ತುಗಳ ಮೇಲೆ ಭಾರೀ ಪರಿಣಾಮ ಬೀರಲಿದೆ.

ಕಾಫಿ-ಟೀ ತಯಾರಿಗೆ ಇಂಡಕ್ಷನ್‌ ಪಾತ್ರೆಗಳು


ಹೋಟೆಲ್‌ಗಳಲ್ಲಿ ಅಡುಗೆ-ತಿಂಡಿ ತಯಾರಿಗೆ ಅನಿಲ ಬೇಕೇ ಬೇಕು. ಸೌದೆ ಒಲೆಯಲ್ಲಿಅಡುಗೆ ತಯಾರಿಸುವುದು ಕಷ್ಟ. ಅನಿಲ ಸರಬರಾಜಿನಲ್ಲಿತೀವ್ರತರವಾದ ವ್ಯತ್ಯಯವಾದರೆ ಹೋಟೆಲ್‌ಗಳನ್ನು ಬಂದ್‌ ಮಾಡುವುದು ಅನಿವಾರ್ಯವಾಗುತ್ತದೆ. ಸದ್ಯ ನಾವು ಮಧ್ಯಾಹ್ನ ಊಟದ ವೇಳೆಯಲ್ಲಿ ದೋಸೆ ನಿಲ್ಲಿಸಿದ್ದೇವೆ. ಕಾಫಿ-ಟೀ ತಯಾರಿಗೆ ಇಂಡಕ್ಷನ್‌ ಪಾತ್ರೆಗಳನ್ನು ಖರೀದಿಸಿದ್ದೇವೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಆಧರಿಸಿ ನಮ್ಮ ಹೋಟೆಲ್‌ಗಳು ತೆರೆಯಬೇಕೋ ಅಥವಾ ಬೇಡವೋ ಎಂಬುದರ ಬಗ್ಗೆ ಪರಿಶೀಲಿಸಬೇಕು ಎಂದು ನೃಪತುಂಗ ರಸ್ತೆಯಲ್ಲಿರುವ ಹೋಟೆಲ್‌ ನಿಸರ್ಗ ಗ್ರ್ಯಾಂಡ್‌ನ ಮಾಲೀಕ ಎಸ್‌.ಪಿ. ಕೃಷ್ಣರಾಜ ತಿಳಿಸಿದರು.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಕರಾವಳಿ, ಟಾಪ್ ಸುದ್ದಿಗಳು

ಕುಂದಾಪುರ : ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಶುಭಹಾರೈಸಿದ ಕಾಂಗ್ರೆಸ್ ಹಿರಿಯ ಮುಖಂಡ ಅಶೋಕ್ ಪೂಜಾರಿ ಬೀಜಾಡಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ರಾಜ್ಯದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ – ನೂತನ ಸಿಎಂ ಡಿಕೆಶಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

⚠️ Contents are protected on this website.