ಹುಣಸೂರು, ಜು. 13 : ಬೀಗ ಮುರಿದು ಮನೆಯೊಂದಕ್ಕೆ ಒಳ ನುಗ್ಗಿರುವ ಕಳ್ಳ ಮನೆಯ ಬೀರುವಿನಲ್ಲಿದ್ದ 149 ಗ್ರಾಂ ಚಿನ್ನಾಭರಣ ಹಾಗೂ 5.35 ಲಕ್ಷ ರೂ. ಕಳ್ಳತನ ಮಾಡಿದ್ದಲ್ಲದೆ, ಫ್ರಿಡ್ಜ್ ನಲ್ಲಿದ್ದ ಬಿಯರ್ ಕುಡಿದು ಪರಾರಿಯಾಗಿರುವ ಘಟನೆ ನಗರದ ಎನ್ಇಎಸ್ ಕಾಲೋನಿಯಲ್ಲಿ ನಡೆದಿದೆ.
ನಗರದ ಎನ್ಇಎಸ್ ಕಾಲೋನಿಯ ಸಚ್ಚಿನ್ ಪ್ರಕಾಶ್ರ ಮನೆಯಲ್ಲೇ ಶನಿವಾರ ಮಧ್ಯರಾತ್ರಿ ಘಟನೆ ನಡೆದಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಸ್.ಪಿ. ಈವೆಂಟ್ಸ್ನ ಮಾಲಿಕ ಸಚಿನ್ ಪ್ರಕಾಶ್ ಶನಿವಾರ ಸಂಜೆ ಮನೆಗೆ ಬೀಗ ಹಾಕಿ ಕುಶಾಲ ನಗರದಲ್ಲಿ ಭಾನುವಾರ ನಡೆಯಬೇಕಿದ್ದ ನಿಶ್ಚಿತಾರ್ಥಕ್ಕೆ ತೆರಳಿದ್ದರು. ಬೆಂಗಳೂರಿನಿಂದ ಮಧ್ಯರಾತ್ರಿ ಮನೆಗೆ ಬಂದಿದ್ದ ಸಚಿನ್ ಪ್ರಕಾಶ್ ಪುತ್ರ ಆರ್ಯನ್ ಬಾಗಿಲನ್ನು ಬೀಗ ಮುರಿದು ಒಡೆದಿರುವ ಬಗ್ಗೆ ಗಮನಿಸಿ ತಕ್ಷಣವೇ ತಂದೆಗೆ ಕರೆಮಾಡಿ ತಿಳಿಸಿದ್ದಾರೆ. ತಕ್ಷಣವೇ ತಮ್ಮ ಸ್ನೇಹಿತರಿಗೆ ಕರೆ ಮಾಡಿದ ಸಚಿನ್ ಪ್ರಕಾಶ್ ಮನೆ ಬಳಿ ಹೋಗುವಂತೆ ಮನವಿ ಮಾಡಿದ್ದರಿಂದ ಮನೆ ಬಳಿಗೆ ಹೋದ ವೇಳೆ ಕಳ್ಳತನವಾದ ಬಗ್ಗೆ ಆರ್ಯನ್ ತಿಳಿಸಿದ್ದರಿಂದ ತಕ್ಷಣವೇ ನಗರಠಾಣೆಗೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಎಎಸ್ಐ ರವಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಡಿವೈಎಸ್ಪಿ ಶಿವಮಾದಯ್ಯ, ಇನ್ಸೆಕ್ಟರ್ ಶಿವಮಾದಯ್ಯ, ಎಸ್.ಐ. ನಾಗಯ್ಯ, ಎ.ಎಸ್.ಐ.ಅಂತೋಣಿ ಕ್ರೂಸ್ ಭೇಟಿ ಇತ್ತು ಪರಿಶೀಲಿಸಿ ಸಿಸಿ ಕ್ಯಾಮೆರಾ ಪರಿಶೀಲಿಸಿದ್ದಾರೆ.
ಬೆಳಗಿನ ಜಾವ ಮನೆಗೆ ಬಂದ ಸಚಿನ್ ಪ್ರಕಾಶ್ ಪೊಲೀಸರೊಂದಿಗೆ ಪರಿಶೀಲಿಸಲಾಗಿ ತಮ್ಮ ತಾಯಿಗೆ ಸೇರಿದ ಚಿನ್ನದ ತಾಳಿ, ಚಿನ್ನದ ಓಲೆ, ಬಳೆ, 5 ಗ್ರಾಂ ಚಿನ್ನದ ಕಾಯಿನ್, ಎರಡು ಉಂಗುರ ಹಾಗೂ ಪತ್ನಿಯ ಚಿನ್ನದ ಸರ, 20 ಗ್ರಾಂನ ಎರಡು ಪೆಂಡೆಂಟ್, 3 ಜೊತೆ ಓಲೆ, 4 ಗ್ರಾಂನ ಎರಡು ಹುಕ್ಸ್ ಹಾಗೂ ಡೈಮೆಂಡ್ ಉಂಗುರ ಸೇರಿದಂತೆ ಒಟ್ಟು 149 ಗ್ರಾಂ ಚಿನ್ನಾಭರಣ ಹಾಗೂ 5.35 ಲಕ್ಷ ರೂ. ನಗದು ಕದ್ದೊಯ್ದಿದ್ದಾರೆಂದು ದೂರಿನಲ್ಲಿ ತಿಳಿಸಿದ್ದಾರೆ.
ಚಿನ್ನಾಭರಣ ಹಾಗೂ ನಗದು ದೋಚಿದ್ದಲ್ಲದೆ ಫ್ರಿಡ್ಜ್ ನಲ್ಲಿಟ್ಟಿದ್ದ ಒಂದು ಬಿಯರ್ ಬಾಟಲ್ನ್ನು ಕದ್ದು ಮನೆಯ ಮುಂಭಾಗದ ಮೈದಾನದಲ್ಲಿ ಕುಡಿದು ಪರಾರಿಯಾಗಿದ್ದಾನೆ. ಪುತ್ರ ಆರ್ಯನ್ ಮನೆಗೆ ಬರುವ ವೇಳೆ ಮೈದಾನದಲ್ಲಿ ಬಿಯರ್ ಕುಡಿಯುತ್ತಿದ್ದ ಕಳ್ಳನನ್ನು ನೋಡಿದ್ದನಾದರೂ ಯಾರೋ ಇರಬೇಕೆಂದು ಮನೆಗೆ ತೆರಳಿದ್ದ, ಮರಳಿ ಬರುವ ವೇಳೆಗೆ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.


