ಕಲಬುರಗಿ, ಮೇ 23 : ಚಿತ್ತಾಪೂರ ತಾಲೂಕಿನ ಲಾಡ್ಲಾಪುರ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ತಡ ರಾತ್ರಿ ಲಾರಿ ಢಿಕ್ಕಿಯಾದ ಪರಿಣಾಮ ಕ್ರೂಸರ್ ನಲ್ಲಿದ್ದ ಒಂದೇ ಕುಟುಂಬದ ಐವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತ ದುರ್ದೈವಿಗಳು ಇಂಗಳಗಿ ಗ್ರಾಮದ ನಿವಾಸಿಗಳಾಗಿದ್ದು, ಮಹಮದ್ ಹುಸೇನ್(60), ಫಾತಿಮಾ ಅಬ್ದುಲ್(40), ರಸೂಲ್ ಬಿ(40),ಮಹಿಬೂಬ (37),ಟೋಲು ಪಾಷಾ (24) ಎನ್ನುವವರಾಗಿದ್ದಾರೆ. ಕುಟುಂಬದ ಸದಸ್ಯನೊಬ್ಬನಿಗೆ ಪಾರ್ಶ್ವವಾಯು ಹೊಡೆದ ಹಿನ್ನೆಲೆ ಯಾದಗಿರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆಸ್ಪತ್ರೆಗೆ ದಾಖಲು ಮಾಡಿ ವಾಪಸ್ ಗ್ರಾಮಕ್ಕೆ ಬರುವಾಗ ಭೀಕರ ಅಪಘಾತ ಸಂಭವಿಸಿದೆ.
ಲಾರಿ ಗುದ್ದಿದ ರಭಸಕ್ಕೆ ಕ್ರೂಸರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಅಗತ್ಯ ನೆರವಿನ ಭರವಸೆ ನೀಡಿದ ಪ್ರಿಯಾಂಕ್ ಖರ್ಗೆ
ಐವರು ಸ್ಥಳದಲ್ಲೇ ಮೃತರಾಗಿರುವ ವಿದ್ರಾವಕ ಸುದ್ದಿಯು ಮನಸಿನಲ್ಲಿ ತಲ್ಲಣವನ್ನುಂಟುಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ದಿಗ್ಧಮೆ ವ್ಯಕ್ತಪಡಿಸಿದ್ದಾರೆ. ಎಕ್ಸ್ ಪೋಸ್ಟ್ ನಲ್ಲಿ ಅಮೂಲ್ಯ ಜೀವಗಳು ಅಪಘಾತಕ್ಕೆ ಬಲಿಯಾಗಿರುವುದರ ಬಗ್ಗೆ ನೋವು ವ್ಯಕ್ತಪಡಿಸಿ, ” ಭಾರವಾದ ಮನಸ್ಸಿನಿಂದಲೇ ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ, ಮೃತರ ಕುಟುಂಬ ವರ್ಗವು ಧೈರ್ಯ ತಂದುಕೊಳ್ಳಬೇಕು ಎಂದಷ್ಟೇ ಈಗ ಹೇಳಬಹುದಾದ ಸಮಾಧಾನದ ಮಾತುಗಳು” ಎಂದು ಬರೆದಿದ್ದಾರೆ.
“ಈ ಕುರಿತು ಜಿಲ್ಲಾ ಪೊಲೀಸ್ ಇಲಾಖೆಯೊಂದಿಗೆ ಮಾತನಾಡಿದ್ದೇನೆ, ನಾನು ಮತ್ತು ಜಿಲ್ಲಾಡಳಿತವು ಮೃತರ ಕುಟುಂಬದವರ ಅಗತ್ಯ ನೆರವಿಗೆ ಪೂರ್ಣ ಸಹಕಾರ ನೀಡಲಿದ್ದೇವೆ. ಪ್ರೀತಿಪಾತ್ರರ ಅಗಲಿಕೆ ಭರಿಸುವ ಶಕ್ತಿ ಮೃತರ ಕುಟುಂಬವರ್ಗಕ್ಕೆ ಸಿಗುವಂತಾಗಲಿ ಎಂದು ಆಶಿಸುತ್ತೇನೆ” ಎಂದು ಪೋಸ್ಟ್ ಮಾಡಿದ್ದಾರೆ.

