ಬೆಳ್ತಂಗಡಿ, ಏ. 29 : ಇತಿಹಾಸ ಪ್ರಸಿದ್ಧ ದೇವಸ್ಥಾನಗಳಾದ ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನ ಹಾಗೂ ಶ್ರೀ ಮಹಾಗಣಪತಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಕೆಲವು ದಿನಗಳು ಉರುಳಿದರೂ, ಯಾವುದೇ ಸುಳಿವು ಲಭ್ಯವಾಗಿಲ್ಲ. ಲೋಕನಾಡು ದೇವಸ್ಥಾನದ ಸಿಸಿಟಿವಿ’ಯಲ್ಲಿ ಕಳ್ಳರ ಮುಖ ಚಹರೆ ಪತ್ತೆಯಾದರೂ ಕೂಡಾ, ಕಳ್ಳರ ಸುಳಿವು ಲಭ್ಯವಾಗದೇ ಇರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಕಳವು :
ಕನ್ಯಾಡಿ ಗ್ರಾಮದ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಕಳ್ಳತನ ನಡೆಸಿರುವ ಕೃತ್ಯ ಏಪ್ರಿಲ್ 22ರಂದು ಬೆಳಕಿಗೆ ಬಂದಿತ್ತು. ಏಪ್ರಿಲ್ 21ರಂದು ಪೂಜೆ ಮುಗಿದ ಬಳಿಕ ದೇವಸ್ಥಾನದ ಬಾಗಿಲು ಹಾಕಿ ಹೋಗಲಾಗಿತ್ತು. ಮರುದಿನ ಬೆಳಗ್ಗೆ ದೇವಸ್ಥಾನಕ್ಕೆ ಸಿಬ್ಬಂದಿಗಳು ಬಂದ ಸಂದರ್ಭದಲ್ಲಿ ಬಾಗಿಲು ಹೊಡೆದಿರುವುದು ಕಂಡು ಬಂದಿತ್ತು. ದೇವಸ್ಥಾನದ ಒಳಗಿದ್ದ 4 ಕಾಣಿಕೆ ಹುಂಡಿ ಕಳವುಗೈಯ್ಯಲಾಗಿತ್ತು. ಕಳವುಗೈದ ಕಾಣಿಕೆ ಹುಂಡಿಗಳನ್ನು ದೇವಸ್ಥಾನ ಮುಂಭಾಗದ ನೇತ್ರಾವತಿ ನದಿ ತೀರದಲ್ಲಿ ಅದರಲ್ಲಿದ್ದ ಹಣವನ್ನ ದೋಚಿ ಎಸೆದು ಪರಾರಿಯಾಗಿದ್ದರು. ಕಳ್ಳರ ಚಲನವಲನಗಳು ಹಾಗೂ ಓರ್ವ ಕಳ್ಳನ ಮುಖ ಚಹರೆ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಳ್ಳತನ
ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದ ಕೆಲವೇ ದೂರದ ಅಂತರದಲ್ಲಿರುವ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡಂತಿರುವ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಏ.24 ರಂದು ಕಳ್ಳತನ ಕೃತ್ಯ ನಡೆದಿತ್ತು. ಬೆಳಗಿನ ಜಾವ 4 ಗಂಟೆಗೆ ಅರ್ಚಕರು ದೇವಸ್ಥಾನದ ಬಾಗಿಲು ತೆಗೆಯುವ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಕಳ್ಳರು ಒಳಗೆ ಇರುವುದು ತಿಳಿದು ಅರ್ಚಕರು ಸ್ಥಳೀಯ ನಿವಾಸಿಯನ್ನು ಕರೆದುಕೊಂಡು ಬರುವ ವೇಳೆಯಲ್ಲಿ ದೇವಸ್ಥಾನದ ಒಳಗಿನ ಹಂಚು ತೆಗೆದು ಪರಾರಿಯಾಗಿದ್ದರು.
ಒಂದೇ ಪರಿಸರದ ಎರಡು ದೇವಸ್ಥಾನಗಳಲ್ಲಿ ಕೆಲವೇ ದಿನಗಳ ಅಂತರದಲ್ಲಿ ಕಳ್ಳರು ಕೈಚಳಕ ಮೆರೆದು, ಕೆಲವು ದಿನಗಳೇ ಉರುಳಿದೆ. ಆದರೆ, ಇನ್ನೂ ಕೂಡಾ ಕಳ್ಳರ ಸುಳಿವು ಲಭ್ಯವಾಗಿಲ್ಲ. ಬೆಳ್ತಂಗಡಿ ಪೊಲೀಸರು ಕಳ್ಳರನ್ನು ಪತ್ತೆಹಚ್ಚಲು ತನಿಖೆಯನ್ನು ನಡೆಸುತ್ತಿದ್ದಾರೆ. ಆದಷ್ಟು ಶೀಘ್ರವೇ ಕಳ್ಳರನ್ನು ಪೊಲೀಸ್ ಇಲಾಖೆ ಪತ್ತೆ ಹಚ್ಚಲಿ ಎಂಬುದು ದೇವಸ್ಥಾನದ ಭಕ್ತಾದಿಗಳ ಆಗ್ರಹವಾಗಿದೆ.

