ಕಲ್ಮಂಜ, ಏ. 13 : ಗ್ರಾಮದ ಬೂತ್ ಸಂಖ್ಯೆ 89ರ ಭಾರತೀಯ ಜನತಾ ಪಕ್ಷದ ಸಭೆಯು ಬೂತ್ ಅಧ್ಯಕ್ಷರಾದ ಅನಿಲ್ ಗೌಡ ಇವರ ಮನೆಯಲ್ಲಿ ಏ. 12ರಂದು ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಬೆಂಬಲಿತ ಗ್ರಾ. ಪಂ. ಸದಸ್ಯರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಕಲ್ಮಂಜ – ಬೂತ್ ಸಂಖ್ಯೆ 89ರ ಬಿಜೆಪಿ ಬೆಂಬಲಿತ ಸದಸ್ಯರಾಗಿ ಕಳೆದ 05 ವರ್ಷಗಳ ಕಾಲ ಆಡಳಿತ ನಡೆಸಿದ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀ ಪ್ರವೀಣ್ ಗೌಡ ಕರಿಯನೆಲ, ಶ್ರೀಮತಿ ಶೋಭಾವತಿ, ಶ್ರೀ ಕೃಷ್ಣಮೂರ್ತಿ ಹೆಬ್ಬಾರ್ ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಬೆಳ್ತಂಗಡಿ ತಾಲೂಕಿನಲ್ಲೇ ಮೊದಲು ಎಂಬಂತೆ ಗ್ರಾಮ ಪಂಚಾಯತ್ ಸದಸ್ಯರ ಕಾರ್ಯವೈಖರಿಯನ್ನು ಗುರುತಿಸಿ, ಗೌರವಿಸಿದ್ದು ವಿಶೇಷವಾಗಿತ್ತು.

ಈ ವೇಳೆ ಮಾತನಾಡಿದ ಬಿಜೆಪಿ ಕಲ್ಮಂಜ ಶಕ್ತಿ ಕೇಂದ್ರದ ಪ್ರಭಾರಿಗಳಾದ ಶ್ರೀಮತಿ ಪೂರ್ಣಿಮಾ ಅವರು, ಬಿಜೆಪಿ ಪಕ್ಷವು ತನ್ನ ತತ್ವ ಸಿದ್ಧಾಂತವನ್ನೇ ನಂಬಿಕೊಂಡಿರುವ ಪಕ್ಷ ಹೀಗಾಗಿಯೇ ಇಂದು ಜಗತ್ತಿನಲ್ಲೇ ಅತ್ಯಂತ ದೊಡ್ಡ ರಾಜಕೀಯ ಪಕ್ಷವಾಗಿ ಬೆಳೆದು ನಿಂತಿದೆ. ವ್ಯಕ್ತಿಗತ ಯಾವುದೇ ಸಮಸ್ಯೆಗಳಿದ್ದರೂ ಅದೆಲ್ಲವನ್ನೂ ಬದಿಗಿರಿಸಿಕೊಂಡು, ಒಂದೇ ಕುಟುಂಬದಂತೆ ಪಕ್ಷದ ಏಳಿಗೆಗಾಗಿ ಶ್ರಮಿಸಬೇಕು. ಮುಂಬರುವ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಯನ್ನು ಬಹುಮತದಿಂದ ಆರಿಸಲು ನಾವೆಲ್ಲರೂ ಶ್ರಮವಹಿಸಬೇಕು ಎಂದರು.

ಬಿಜೆಪಿ ಹಿರಿಯರಾದ ಶ್ರೀನಿವಾಸ್ ರಾವ್ ಅವರು ಮಾತನಾಡಿ, ಊರಿನ ಅಭಿವೃದ್ಧಿಗಾಗಿ ತಾಲೂಕಿನ ಜನಪ್ರಿಯ ನಾಯಕರೂ, ಜನರ ಸನ್ಮಿತ್ರರೂ ಆಗಿರುವ ಶಾಸಕ ಹರೀಶ್ ಪೂಂಜಾ ಅವರು ನಮ್ಮೂರಿನ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಇಂತಹ ಶಾಸಕರನ್ನು ಪಡೆದ ನಾವೇ ಧನ್ಯರು. ಕಲ್ಮಂಜ ಗ್ರಾಮವನ್ನು ಬಿಜೆಪಿಯ ಭದ್ರಕೋಟೆಯನ್ನಾಗಿಸುವುದು ನಮ್ಮ ಜವಾಬ್ದಾರಿಯಾಗಿದೆ. ಈ ಮೂಲಕ ನಮ್ಮೂರಿನ ಅಭಿವೃದ್ಧಿ, ದೇಶದ ಸುಭೀಕ್ಷೆಗಾಗಿ ನಾವೆಲ್ಲರೂ ಶ್ರಮಿಸೋಣ ಎಂದು ಕರೆ ನೀಡಿದರು.
ವೇದಿಕೆಯಲ್ಲಿ ಜಿಲ್ಲಾ ಎಸ್ ಸಿ ಮೋರ್ಚಾ ಉಪಾಧ್ಯಕ್ಷರಾದ ಶ್ರೀ ರಾಘವ ಕಲ್ಮಂಜ, ಬೂತ್ ಅಧ್ಯಕ್ಷರಾದ ಶ್ರೀ ಅನಿಲ್ ಗೌಡ, ಕಲ್ಮಂಜ ಶಕ್ತಿ ಕೇಂದ್ರದ ಅಧ್ಯಕ್ಷರಾದ ಶ್ರೀಧರ ಮಡಿವಾಳ ಹಾಗೂ ಬೂತ್ ಪದಾಧಿಕಾರಿಗಳು, ಬಿಜೆಪಿ ಕಾರ್ಯಕರ್ತರು ಮತ್ತು ಊರವರು ಉಪಸ್ಥಿತರಿದ್ದರು. ಶ್ರೀ ಸಾಂತಪ್ಪ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿ, ಸ್ವಾಗತಿಸಿದರು.

