ಕಾಸರಗೋಡು, ಮಾ. 24 : ಸುಡುಬಿಸಿಲನ್ನೂ ಲೆಕ್ಕಿಸದೆ ಕಾಸರಗೋಡು ಮಡಿಲಲ್ಲಿ ಮೊಳಗಿತು ಕೇಸರಿ ರಣಕಹಳೆ. ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಕಾಸರಗೋಡು ವಿಧಾನಸಭಾ ಕ್ಷೇತ್ರ ಎನ್ ಡಿಎ ಅಭ್ಯರ್ಥಿ ಅಶ್ವಿನಿ ಎಂ. ಎಲ್ ಅವರ ಬೃಹತ್ ರೋಡ್ ಶೋ ಹಾಗೂ ನಾಮಪತ್ರ ಸಲ್ಲಿಕೆಯಲ್ಲಿ ಚುನಾವಣಾ ಪ್ರಭಾರಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭಾಗಿಯಾಗಿ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುರುಪು ತುಂಬಿದರು.

ಬಿಜೆಪಿ ಕಾರ್ಯಕರ್ತರಲ್ಲಿ ನವೋಲ್ಲಾಸದ ಹುರುಪು ಮೂಡಿಸಿ, ಆವೇಶ ಭರಿತ ರೋಡ್ ಶೋ ನಡೆಸುವ ಮೂಲಕ ಕಾಸರಗೋಡು ವಿಧಾನಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ಅಶ್ವಿನಿ ಎಂ. ಎಲ್. ಮಾ. 23ರಂದು ನಾಮಪತ್ರ ಸಲ್ಲಿಸಿದರು. ಕರಂದಕ್ಕಾಡು ಮೖದಾನದಿಂದ ಹೊರಟ ರೋಡ್ ಶೋ ಮೂಲಕ ಸಾರ್ವಜನಿಕ ಪ್ರದರ್ಶನಾ ಮೆರವಣಿಗೆ ನಡೆಸಿ ಅಭ್ಯರ್ಥಿ ಎಂ. ಎಲ್. ಅಶ್ವಿನಿ ಕಾರ್ಯಕರ್ತರಲ್ಲಿ ಹೊಸ ಭರವಸೆ ಮೂಡಿಸಿದರು. ಎಡನೀರು ಮಠಕ್ಕೆ ತೆರಳಿ ಎಡನೀರು ಶ್ರೀಗಳವರಿಂದ ಮಂತ್ರಾಕ್ಷತೆ ಪಡೆದು ಬಂದಿದ್ದ ಅವರು ಮೆರವಣಿಗೆಯಲ್ಲಿ ಸಾಗಿ ಆರ್ ಡಿಒ ಬಿನು ಜೋಸೆಫ್ ಅವರಿಗೆ ನಾಮ ಪತ್ರ ಸಲ್ಲಿಸಿದರು.

ಅವರ ಜತೆ ರೋಡ್ ಶೋ ಮತ್ತು ನಾಮಪತ್ರ ಸಲ್ಲಿಕೆಯ ವೇಳೆ ಚಿತ್ರನಟಿ ಹರ್ಷಿತಾ ಪೂಣಚ್ಚ, ಮಂಜೇಶ್ವರ ಅಭ್ಯರ್ಥಿ ಮಾಜಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಬೈಂದೂರು ಶಾಸಕ ಗುರುರಾಜ ಗಂಟಿಹೊಳೆ, ಪನ್ವೇಲ್ ಶಾಸಕ ಪ್ರಶಾಂತ್ ಠಾಕೂರ್, ದ. ಕ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಚಿತ್ರ ನಟಿ ಹರ್ಷಿಕಾ ಪೂಣಚ್ಚ ಹಾಗೂ ಬಿಜೆಪಿ ನಾಯಕರಾದ ಕೆ. ಶ್ರೀಕಾಂತ್, ಕುಂಟಾರು ರವೀಶ ತಂತ್ರಿ, ಗಣೇಶ ಪಾರೆಕಟ್ಟೆ, ನ್ಯಾಯವಾದಿ ಕರುಣಾಕರನ್ ನಾಯರ್, ದಕ್ಷಿಣ ಕನ್ನಡ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ನಂದನ್ ಮಲ್ಯ, ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್ ಗುರುವಾಯನಕೆರೆ, ಬೆಳ್ತಂಗಡಿ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ, ಕಣಿಯೂರು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಮಹೇಶ್ ಜೇಂಕ್ಯಾರ್, ಬೆಳ್ತಂಗಡಿ ಮಂಡಲ ಯುವಮೋರ್ಚಾ ಉಪಾಧ್ಯಕ್ಷರಾದ ಪ್ರಕಾಶ್ ಬಾರ್ಯ, ಕಾರ್ಯದರ್ಶಿ ಗಿರೀಶ್ ಗೌಡ ಬಿ. ಕೆ ಬಂದಾರು, ಮಂಜುನಾಥ್ ಬೆಳ್ತಂಗಡಿ ಇವರುಗಳು ಸಾಥ್ ನೀಡಿದರು.
ತಾವರೆ ಚಿಹ್ನೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಅಶ್ವಿನಿ ಅವರು ಕೊರಳಲ್ಲಿ ತಾವರೆ ಹೂವಿನ ಹಾರ ಧರಿಸಿ ರೋಡ್ ಶೋದಲ್ಲಿ ಸಂಭ್ರಮಿಸಿದರು.

