ಚಿಕ್ಕಮಗಳೂರು, ಮಾ. 13 : “ಶಕ್ತಿ” ಕಳೆದುಕೊಂಡ ಸರ್ಕಾರಿ ಬಸ್ ಸೀಟ್’ಗೆ ರೈತನೋರ್ವ ತನ್ನ ಹೆಗಲ ಮೇಲಿನ ಟವೆಲ್ ಕಟ್ಟಿ ಆಸನಕ್ಕೆ ಆಸರೆಯಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಮುರಿದು ಹೋಗಿದ್ದ ಬಸ್ಸಿನ ಸೀಟಿಗೆ ರೈತರೊಬ್ಬರು ತಮ್ಮ ಮೈಮೇಲಿದ್ದ ಟವೆಲ್ ಅನ್ನೇ ಕಟ್ಟಿ, ಸೀಟನ್ನು ಸರಿಪಡಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುವ ಮೂಲಕ ಸರ್ಕಾರದ ಗಮನ ಸೆಳೆದಿದ್ದಾರೆ.
ಚಿಕ್ಕಮಗಳೂರು ಡಿಪೋಗೆ ಸೇರಿದ ಮೈಸೂರು ಮಾರ್ಗದ ಬಸ್ ಹಾಸನದ ಕಡೆಗೆ ಪ್ರಯಾಣಿಸುತ್ತಿತ್ತು. ಬಸ್ಸಿನ ಸೀಟೊಂದು ಸಂಪೂರ್ಣವಾಗಿ ಮುರಿದು ಹೋಗಿದ್ದು, ಯಾರೂ ಕೂಡ ಅದರ ಮೇಲೆ ಕುಳಿತುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಇತ್ತು. ಬಸ್ಸಿನ ವೇಗಕ್ಕೆ ಸೀಟು ಅಲುಗಾಡುತ್ತಿದ್ದುದರಿಂದ ಬೀಳುವ ಭಯಕ್ಕೆ ಪ್ರಯಾಣಿಕರು ಅಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದರು.
ಬಸ್ ಹತ್ತಿದ ರೈತರೊಬ್ಬರು ಈ ಸೀಟಿನ ಅವಸ್ಥೆ ಕಂಡು ಸುಮ್ಮನಾಗಲಿಲ್ಲ. ಕೂಡಲೇ ತಮ್ಮ ಹೆಗಲ ಮೇಲಿದ್ದ ಟವೆಲ್ ತೆಗೆದು, ಮುರಿದಿದ್ದ ಸೀಟನ್ನು ಪಕ್ಕದ ರಾಡ್ಗೆ ಭದ್ರವಾಗಿ ಕಟ್ಟಿದರು. ಆ ಮೂಲಕ ಸೀಟು ಅಲುಗಾಡದಂತೆ ಮಾಡಿ ತಾವೂ ಅಲ್ಲಿ ಕುಳಿತು ಪ್ರಯಾಣಿಸಿದರು. ವಿಶೇಷವೆಂದರೆ, ತಾವು ಇಳಿಯುವಾಗಲೂ ಆ ಟವೆಲ್ ಅನ್ನು ಬಿಚ್ಚದೆ, “ನಂತರ ಬರುವವರಿಗೂ ಅನುಕೂಲವಾಗಲಿ, ಇದು ಸರ್ಕಾರಕ್ಕೆ ನನ್ನ ಕಡೆಯಿಂದ ಗಿಫ್ಟ್ ಇರಲಿ” ಎನ್ನುವಂತೆ ಅಲ್ಲಿಯೇ ಬಿಟ್ಟು ಹೋಗಿದ್ದಾರೆ.
ಇತ್ತ ರೈತನ ಸೇವೆಗೆ ಮೆಚ್ಚಿದ ಸಹ ಪ್ರಯಾಣಿಕರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಕ್ತಿ ಯೋಜನೆಯ ಮೂಲಕ ಉಚಿತ ಪ್ರಯಾಣವನ್ನೇನೋ ಮಹಿಳೆಯರಿಗೆ ಕಲ್ಪಿಸಲಾಗಿದೆ. ಆದರೆ, ಬಸ್ ನಿರ್ವಹಣೆ ಮಾತ್ರ ನಡೆಯುತ್ತಿಲ್ಲ. ಉಚಿತವಾಗಿ ಪ್ರಯಾಣಿಸುವ ಬಸ್ ಗಳು ದಾರಿ ಮಧ್ಯೆ ಕೆಟ್ಟು ನಿಲ್ಲುತ್ತಿದ್ದು ಇದರಿಂದಲೂ ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ.

