ಬೆಳ್ತಂಗಡಿ, ಮೇ 21 : ಜಲಪಾತ ವೀಕ್ಷಣೆ ನೆಪದಲ್ಲಿ ಮೂವರು ಯುವತಿಯರನ್ನು ದಿಡುಪೆ ಜಲಪಾತಕ್ಕೆ ಕರೆತಂದು ಅತ್ಯಾಚಾರಕ್ಕೆ ಮುಂದಾದ ಮೂವರು ಯುವಕರನ್ನು ಸ್ಥಳೀಯರು ಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ವರದಿಯಾಗಿದೆ.
ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಮೂವರು ಯುವತಿಯರು ಹಾಗೂ ಕೇರಳ ಕಾಸರಗೋಡು ಮೂಲದ ಅಬ್ದುಲ್ ಖಾದರ್ ಅಲ್ತಫ್ (36), ಫೈಜಲ್ ಅದಿಲ್ (27) ಹಾಗೂ ಉಸ್ಮಾನ್ ಸಾಲೀಂ (18) ಎಂಬ ಮೂವರು ಯುವಕರೊಂದಿಗೆ ಮೇ.20 ರಂದು ಬೆಳ್ತಂಗಡಿ ತಾಲೂಕಿನ ದಿಡುಪೆ ಜಲಪಾತಕ್ಕೆ ತೆರಳಿದ್ದರು. ಈ ವೇಳೆ ಮೂವರು ಯುವಕರು ತಮ್ಮೊಂದಿಗಿದ್ದ ಯುವತಿಯರೊಂದಿಗೆ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡಿದ್ದಾರೆ.
ಯುವತಿಯರು ಆಗ ಪ್ರತಿರೋಧಿಸಿ ಬೊಬ್ಬೆ ಹಾಕಿದಾಗ ಸ್ಥಳದಲ್ಲಿದ್ದ ಸಾರ್ವಜನಿಕರು ಮೂವರು ಯುವಕರನ್ನು ಹಿಡಿದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿರುತ್ತಾರೆ. ಬಳಿಕ ಬೆಳ್ತಂಗಡಿ ಪೊಲೀಸರು ಆಗಮಿಸಿ ಯುವಕರನ್ನು ವಶಕ್ಕೆ ಪಡೆದು ಮೂವರು ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.
ಕೇರಳ ಮೂಲದ ಯುವಕರಾದ ಅಬ್ದುಲ್ ಖಾದರ್ ಅಲ್ತಫ್, ಫೈಜಲ್ ಅದಿಲ್, ಉಸ್ಮಾನ್ ಸಾಲೀಂ ವಿರುದ್ಧ ನೊಂದ ಯುವತಿಯರು ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಯುವಕರು ಬಳಸಿದ ಸ್ವೀಫ್ಟ್ ಕಾರನ್ನು ವಶಕ್ಕೆ ಪಡೆದು ಯುವಕರನ್ನು ಬಂಧಿಸಿ ತನಿಖೆ ನಡೆಸುತ್ತಿದ್ದಾರೆ.

