ಬಂಟ್ವಾಳ, ಜು. 24 : ನಮ್ಮ ತಂಗಿಯನ್ನು ಕೊಲೆ ಮಾಡುವುದಕ್ಕೆ ಹಂತಕ ಚೇತನ್ ಗೆ ಯಾರೋ ಸಹಕಾರ ನೀಡಿರುವ ಸಾಧ್ಯತೆ ಇದೆ೦ ಆತ ಒಬ್ಬನೇ ಮಾಡಲು ಸಾಧ್ಯವಿಲ್ಲವೆಂದು ಮೃತ ಲಾವಣ್ಯ ಅವರ ಸಹೋದರಿ ತೇಜಾಕ್ಷಿ ತಿಳಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಯೊಂದಿಗೆ ಮಾತನಾಡಿರುವ ಅವರು, ಲಾವಣ್ಯ ಸದಾ ನಮ್ಮೊಂದಿಗೆ ಆತ್ಮೀಯತೆಯಿಂದಲೇ ಇರುತ್ತಿದ್ದವಳು. ಯಾವತ್ತೂ ಕೂಡಾ ಚೇತನ್ ಬಗ್ಗೆ ನಮ್ಮೊಂದಿಗೆ ಮಾತನಾಡಿಲ್ಲ. ಸುಮಾರು 06 ವರ್ಷಗಳ ಹಿಂದೆ ಆರೋಪಿ ಚೇತನ್ ನಮ್ಮ ಮನೆ ಪಕ್ಕದಲ್ಲಿರುವ ಆತನ ಸಂಬಂಧಿಕರ ಮನೆಗೆ ಬರುತ್ತಿದ್ದ ಸಂದರ್ಭ ನಮ್ಮ ಮನೆಗೂ ಆಗಮಿಸುತ್ತಿದ್ದ. ಆದರೆ, ಆತನೊಂದಿಗೆ ನಾವು ಹೆಚ್ಚಾಗಿ ಮಾತನಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.
ನನ್ನ ತಂಗಿಯನ್ನು ಕೊಂದ ಚೇತನ್ ಗೆ ಗಲ್ಲುಶಿಕ್ಷೆಯನ್ನು ನೀಡಬೇಕು. ಆತ ಒಬ್ಬನೇ ಈ ಕೃತ್ಯವನ್ನು ಎಸಗಿರುವ ಸಾಧ್ಯತೆ ಕಡಿಮೆ. ಆಕೆ, ಬರುವ ಸಮಯ, ಬಸ್ ಸಮಯ ಈ ಎಲ್ಲಾ ಮಾಹಿತಿಯನ್ನು ಯಾರೋ ಚೇತನ್ ಗೆ ನೀಡಿದ್ದಾರೆ ಎಂಬುದು ನಮ್ಮ ಭಾವನೆ. ಹೀಗಾಗಿ, ಈ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸಿ, ಕೊಲೆಗೆ ಸಹಕರಿಸಿದವರಿಗೂ ಗಲ್ಲು ಶಿಕ್ಷೆಯನ್ನೇ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಇಡೀ ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ನಡೆದ ಅಮಾಯಕ ಲಾವಣ್ಯಳ ಹತ್ಯೆ ಪ್ರಕರಣ, ಆರೋಪಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತ ಗುಣಮುಖವಾದ ತಕ್ಷಣ ಆತನನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಲಯದ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ. ಚಾರ್ಜ್ ಶೀಟ್ ಬಳಿಕವೇ ಆತನಿಗೆ ಯಾವ ರೀತಿಯ ಶಿಕ್ಷೆ ದೊರಕಲಿದೆ ಎಂಬುದನ್ನು ಕಾದು ನೋಡಬೇಕಿದೆ.


