ಬಂಟ್ವಾಳ, ಜು. 17 : ಪಾಪಿ ಹಂತಕನ ದುಷ್ಕೃತ್ಯಕ್ಕೆ ಬಲಿಯಾದ ಮುಗ್ಧ ಹೆಣ್ಣು ಮಗಳು ಲಾವಣ್ಯಳಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಯುವತಿಯ ಆಕ್ರಂದನ ಮುಗಿಲು ಮುಟ್ಟಿದ್ದು, ಕಲ್ಲು ಹೃದಯವೂ ಕರಗುವಂತಿತ್ತು.
ಮೃತ ಲಾವಣ್ಯಳ ಹೆತ್ತವರು, ಕುಟುಂಬಸ್ಥರು ಹಾಗೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದ್ದಾರೆ.
ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಲಾವಣ್ಯಳ ಕುಟುಂಬಕ್ಕೆ ಬೇಟಿ ನೀಡಿ, ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಈ ವೇಳೆ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ಅವರು, “ನಿನ್ನೆವರೆಗೂ ನಗುನಗುತ್ತಿದ್ದ ಈ ಮನೆ ಇಂದು ದುಃಖದ ಮಡುವಾಗಿದೆ. ಈ ನೋವು ಕೇವಲ ಒಂದು ಕುಟುಂಬದದ್ದಲ್ಲ, ನಮ್ಮೆಲ್ಲರ ನೋವಾಗಿದೆ. ಅಮಾಯಕ ಯುವತಿಯ ಜೀವ ಕಸಿದ ಈ ಪ್ರಕರಣದಲ್ಲಿ ತಪ್ಪಿತಸ್ಥನಿಗೆ ಕಾನೂನು ಪ್ರಕಾರ ಕಠಿಣ ಶಿಕ್ಷೆ ಆಗಬೇಕು. ಲಾವಣ್ಯ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ದೇವರು ನೀಡಲಿ” ಎಂದು ಪ್ರಾರ್ಥಿಸಿದರು.


