ಬಂಟ್ವಾಳ, ಜು. 17 : ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ನಡೆದಿರುವ ಭೀಕರ ಕೃತ್ಯದಲ್ಲಿ ಅಮಾಯಕ ಯುವತಿ ಲಾವಣ್ಯ ಅಸುನೀಗಿದ್ದಾರೆ. ಮೃತ ಲಾವಣ್ಯಳ ಮನೆಯಲ್ಲಿ ಹೆತ್ತವರು ಹಾಗೂ ಬಂಧುಮಿತ್ರರ ಆಕ್ರಂದನ ಮುಗಿಲು ಮುಟ್ಟಿದೆ.
ಮಗಳನ್ನು ಹತ್ಯೆಗೈದ ಆರೋಪಿ ಚೇತನ್ ನನ್ನು ಊರಿನ ಜನರೆಲ್ಲಾ ಸೇರಿ ಇಲ್ಲಿಗೆ ಕರೆತನ್ನಿ ಆತನನ್ನು ಇಲ್ಲೇ ಮುಗಿಸುತ್ತೇನೆ ಎಂದು ಮೃತ ಲಾವಣ್ಯಳ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮಗಳು ಅಮಾಯಕಳು, ಆಕೆ ಯಾವತ್ತೂ ಆತನ ಬಗ್ಗೆ ನನ್ನಲ್ಲಿ ಹೇಳಿಲ್ಲ. ಆಕೆ ಯಾರ ಜೊತೆಗೂ ಮಾತನಾಡುವ ಮಗುವಲ್ಲ, ಆಕೆ ಕೆಲಸಕ್ಕೆ ತೆರಳುತ್ತೇನೆ ಎಂದಾಗ ಬೇಡ ಎಂದಿದ್ದೆ. ಆದರೆ, ಮನೆಯಲ್ಲೇ ಇರುವುದಿಲ್ಲ ಕೆಲಸಕ್ಕೆ ಹೋಗುತ್ತೇನೆಂದು ಹಠ ಹಿಡಿದಿದ್ದಳು. ಅವಳು ಕೆಲಸ ಮಾಡಿ ನಮಗೆ ಜೀವನ ಸಾಗಿಸುವ ಅನಿವಾರ್ಯತೆ ಇರಲಿಲ್ಲ. ಆಕೆಯ ಒತ್ತಾಯಕ್ಕಾಗಿ, ಕಲಿತ ಮಗಳು ಎನ್ನುವ ಕಾರಣಕ್ಕೆ ಕೆಲಸಕ್ಕೆ ಕಳುಹಿಸಿದ್ದೆವು.
ಎಲ್ಲಾ ವಿಚಾರವನ್ನು ನಮ್ಮ ಬಳಿ ಹೇಳುತ್ತಿದ್ದ ಮಗು ಅವಳು, ಭವಿಷ್ಯದ ಬಗ್ಗೆ ಹಲವು ಕನಸುಗಳನ್ನು ಇಟ್ಟುಕೊಂಡಿದ್ದ ಮಗು ಅವಳು. ಯಾವುದೇ ಕಾರಣಕ್ಕೂ ಆರೋಪಿಯನ್ನು ಸುಮ್ಮನೆ ಬಿಡಬಾರದು ಎಂದು ಮೃತ ಯುವತಿಯ ತಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.


