ಉತ್ತರ ಪ್ರದೇಶ, ಏ. 11 : ಇಲ್ಲಿನ ಕತ್ವಾರು ಕಾ ಪುರ ಪ್ರದೇಶದಲ್ಲಿ ಶನಿವಾರ(ಏ11) ಬೆಳ್ಳಂಬೆಳಗ್ಗೆ ವಕೀಲರೊಬ್ಬರನ್ನು ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಕೃತ್ಯ ಎಸಗಿದ ಬಳಿಕ ದಾಳಿಕೋರರು ಬೈಕ್ ಸ್ಥಗಿತಗೊಂಡಿದ್ದರಿಂದ ತಪ್ಪಿಸಿಕೊಳ್ಳಲು ಕೆಲ ಕಾಲ ಹೆಣಗಾಡುತ್ತಿರುವುದನ್ನು ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಹತ್ಯೆಗೀಡಾದ ವಕೀಲ ರಾಜೀವ್ ಸಿಂಗ್ ಅವರು ತಮ್ಮ ದಿನನಿತ್ಯದ ಬೆಳಗಿನ ವಾಕಿಂಗ್ ಗೆ ಹೊರಟಿದ್ದಾಗ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ಅವರನ್ನು ಸಮೀಪಿಸಿದ್ದು, ಒಬ್ಬಾತ ದೇಶೀಯ ಪಿಸ್ತೂಲಿನಿಂದ ಹತ್ತಿರದಿಂದ ಗುಂಡು ಹಾರಿಸಿದ್ದಾನೆ. ಸಿಂಗ್ ತತ್ ಕ್ಷಣವೇ ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ದಾಳಿಯ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದ್ದು, ದಾಳಿಕೋರನು ಒಳಗೆ ಬರುವ ಮೊದಲು ಕಾಯುತ್ತಾ ನಿಂತು ಹತ್ತಿರದಿಂದ ಗುಂಡು ಹಾರಿಸುತ್ತಿರುವುದನ್ನು ದೃಶ್ಯಗಳು ತೋರಿಸಿವೆ,ಇನ್ನೊಬ್ಬ ಸಹಚರ ಮೋಟಾರ್ ಸೈಕಲ್ನಲ್ಲಿ ಕುಳಿತಿದ್ದ. ಗುಂಡು ಹಾರಿಸಿದ ನಂತರ, ದಾಳಿಕೋರ ಬೈಕ್ನತ್ತ ಓದಿದ್ದು ಕೆಲ ಹೊತ್ತು ಬೈಕ್ ಸ್ಟಾರ್ಟ್ ಆಗಲೇ ಇಲ್ಲ. ಇದರಿಂದಾಗಿ ಅವರು ತಪ್ಪಿಸಿಕೊಳ್ಳುವುದು ವಿಳಂಬವಾಯಿತು. ಆ ಹೊತ್ತಿಗೆ, ಕೆಲವು ಸ್ಥಳೀಯರು ಸ್ಥಳದಲ್ಲಿ ಜಮಾಯಿಸಲು ಪ್ರಾರಂಭಿಸಿದ್ದರು ಆದರೆ ಗುಂಡು ಹಾರಿಸಿದ ಆರೋಪಿಗಳು ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ. ಬೈಕ್ ಕೊನೆಗೂ ಸ್ಟಾರ್ಟ್ ಆಗಿದ್ದು, ಆರೋಪಿಗಳು ಪರಾರಿಯಾದರು.
ಬೆಳ್ಳಂಬೆಳಗ್ಗೆ ನಡೆದ ಈ ಹತ್ಯೆಯು ಪ್ರದೇಶದಲ್ಲಿ ಭೀತಿಯನ್ನು ಹುಟ್ಟುಹಾಕಿದೆ. ಈ ಘಟನೆಯು ಕಾನೂನು ವಲಯದ ಸದಸ್ಯರಲ್ಲಿಯೂ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಪೊಲೀಸರು ಸ್ಥಳಕ್ಕೆ ಧಾವಿಸಿ, ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿಕೊಂಡು ಆರೋಪಿಗಳನ್ನು ಪತ್ತೆ ಹಚ್ಚುವ ಪ್ರಯತ್ನಗಳನ್ನು ಮುಂದುವರಿಸಿದ್ದಾರೆ.

