ಬೆಳ್ತಂಗಡಿ, ಮಾ. 29 : ತಾಲೂಕಿನ ವಿವಿಧೆಡೆ ಶನಿವಾರ ಸಂಜೆ ಭಾರೀ ಗಾಳಿ ಮಳೆಗೆ ಹಲವು ಕಡೆಗಳಲ್ಲಿ ಮನೆ ಸೇರಿದಂತೆ ಅಪಾರ ಹಾನಿ ಸಂಭವಿಸಿದ್ದು, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹಾನಿಗೊಳಗಾದ ಸ್ಥಳಗಳಿಗೆ ರಾತ್ರಿಯೇ ಭೇಟಿ ನೀಡಿ ಪರಿಶೀಲನೆ ನಡೆಸಿದರಲ್ಲದೇ ಮನೆಯವರಿಗೆ ಧೈರ್ಯ ತುಂಬಿ ಪರಿಹಾರದ ಭರವಸೆಯನ್ನು ನೀಡಿದ್ದಾರೆ. ಈ ವೇಳೆ ಶಾಸಕರೊಂದಿಗೆ ಯೋಗೀಶ್ ಅಲಂಬಿಲ ಸೇರಿದಂತೆ ಇನ್ನಿತರರು ಇದ್ದರು.

ಕೊಕ್ಕಡ ಗ್ರಾಮದ ದಡ್ಡು ಎಂಬಲ್ಲಿಯ ಕಾಂತಪ್ಪ ಗೌಡ ಅವರ ಮನೆಯ ಮೇಲಿನ ಮಹಡಿಯ ಶೀಟ್ ಸಂಪೂರ್ಣ ಹಾನಿ, ಪಟ್ರಮೆಯ ಬೋಳೊಡಿ, ಕಳೆಂಜ ಗ್ರಾಮದ ಪಾದೆ, ಪಡಂಗಡಿ ಗ್ರಾಮದದಲ್ಲಿ ಕೋಳಿ ಫಾರ್ಮ್ ನೆಲಕ್ಕುರುಳಿದ್ದು ಹಾಗೂ ತೆಂಕಕಾರಂದೂರು, ಬಳೆಂಜ ಗ್ರಾಮ ಸೇರಿದಂತೆ ಇನ್ನಿತರ ಕಡೆಗಳಲ್ಲಿಯೂ ವಿಪರೀತ ಗಾಳಿಯಿಂದಾಗಿ ಮನೆ, ಕೊಟ್ಟಿಗೆ, ಕೃಷಿಗೆ ಭಾರೀ ಹಾನಿ ಉಂಟಾಗಿದೆ. ಬೆಳ್ತಂಗಡಿ ಸಂತೆಕಟ್ಟೆ ಬಳಿ ರಿಕ್ಷಾ ತಂಗುದಾಣದ ಮೇಲ್ಟಾವಣಿ ಧರೆಗುರುಳಿ ಬಿದ್ದಿದೆ.




