ಹೊಸದಿಲ್ಲಿ, ಜು. 13 : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು “ನಾನು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ” ಎಂದು ಬಹಳ ಹತಾಶರಾಗಿ ಹೇಳಿದ್ದಾರೆನ್ನುವ ಮಾತೊಂದು ಇದೀಗ ರಾಷ್ಟ್ರ ರಾಜಕಾರಣದಲ್ಲಿ ಭಾರಿ ತಲ್ಲಣ ಸೃಷ್ಟಿಸಿದೆ. 2012ರ ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ, ಅಂದಿನ ಪ್ರಧಾನಿ ಡಾ.ಮನಮೋಹನ್ ಸಿಂಗ್ ತೀವ್ರ ಒತ್ತಡದಲ್ಲಿ ಇದ್ದರು. ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎನ್ನುವ ಆತಂಕಕಾರಿ ಮಾತನ್ನು ನನ್ನ ಬಳಿ ಹೇಳಿದ್ದರು ಎನ್ನುವ ವಿಷಯವನ್ನು ಮಾಜಿ ಮುಖ್ಯ ಚುನಾವಣಾ ಅಧಿಕಾರಿ (CEC) ಎಸ್.ವೈ. ಖುರೇಷಿ ಬಹಿರಂಗ ಪಡಿಸಿದ್ದಾರೆ.
ತಮ್ಮ ಪುಸ್ತಕದಲ್ಲಿ ಈ ಅಂಶವನ್ನು ಉಲ್ಲೇಖಿಸಿರುವ ಖುರೇಷಿಯವರು, ಹಿರಿಯ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಹೇಳಿಕೆಯೊಂದನ್ನು, ಮನಮೋಹನ್ ಸಿಂಗ್ ಅವರು ತೀವ್ರವಾಗಿ ಮನಸ್ಸಿಗೆ ಹಚ್ಚಿಕೊಂಡಿದ್ದರು. ಅಂದಿನ ಯುಪಿಎ ಸರಕಾರ ಮತ್ತು ಚುನಾವಣಾ ಆಯೋಗದ ನಡುವಿನ ಮಹತ್ವದ ಘಟನೆ ಸಂಬಂಧಪಟ್ಟಂತೆ ಸಲ್ಮಾನ್ ಖುರ್ಷಿದ್ ಆಡಿದ ಮಾತು, ಮನಮೋಹನ್ ಸಿಂಗ್ ಅವರನ್ನು ಬೇಸರಕ್ಕೆ ದೂಡಿತ್ತು. ಖುರೇಷಿಯವರ ಮುಂಬರುವ ಪುಸ್ತಕ ’ಇಂಡಿಯಾ ಆಂಡ್ ಐ : ಎ ಹಂಡ್ರೆಡ್ ಮೆಮೊರಿಸ್, ನಾಟ್ ಎ ಮೆಮೊಯಿರ್’ ನಲ್ಲಿ ಮನಮೋಹನ್ ಸಿಂಗ್ ಅವರ ಈ ಅಂಶ ದಾಖಲಾಗಿದೆ.
ಏನಿದು 12 ವರ್ಷಗಳ ಹಿಂದೆ ನಡೆದ ಘಟನೆ?
2012ರಲ್ಲಿ ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಘೋಷಣೆಯಾಗುವ ಕೆಲವೇ ಕೆಲವು ದಿನಗಳ ಮುಂಚೆ, ಕೇಂದ್ರ ಚುನಾವಣಾ ಆಯೋಗವು ಪಂಚ ರಾಜ್ಯಗಳ (ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ್, ಗೋವಾ ಮತ್ತು ಮಣಿಪುರ) ವಿಧಾನಸಭಾ ಚುನಾವಣೆಗಳನ್ನು ನಡೆಸುತ್ತಿತ್ತು. ಆ ಸಮಯದಲ್ಲಿ ಯುಪಿಎ ಸರ್ಕಾರವು ಮುಸ್ಲಿಮರಿಗೆ ಶೇ. 4.5ರಷ್ಟು ಉಪಕೋಟಾ ಮೀಸಲಾತಿಯನ್ನು ಘೋಷಿಸಲು ನಿರ್ಧರಿಸಿತ್ತು. ಆದರೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗ, ಇಂತಹ ಪ್ರಮುಖ ಘೋಷಣೆ ಮಾಡುವುದು ನಿಯಮಗಳ ಉಲ್ಲಂಘನೆ ಎಂದು ಚುನಾವಣಾ ಆಯೋಗ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿತ್ತು. ಆಗ, ಅಂದಿನ ಕಾನೂನು ಸಚಿವರಾಗಿದ್ದ ಸಲ್ಮಾನ್ ಖುರ್ಷಿದ್, ಚುನಾವಣಾ ಪ್ರಚಾರ ಸಭೆಯಲ್ಲಿ, ಮೀಸಲಾತಿ ಜಾರಿಗೆ ತಂದೇ ತರುತ್ತೇವೆ ಎಂದು ಚುನಾವಣಾ ಆಯೋಗಕ್ಕೆ ಸವಾಲು ಹಾಕಿದ್ದರು.
ಸಲ್ಮಾನ್ ಖುರ್ಷಿದ್ ಅವರ ನಡೆಯನ್ನು ಪ್ರಶ್ನಿಸಿ ಬಿಜೆಪಿ ನೀತಿ ಸಂಹಿತೆ ಉಲ್ಲಂಘನೆಯ ದೂರನ್ನು ನೀಡಿತ್ತು. ಕಾಂಗ್ರೆಸ್ ಪರವಾಗಿ ಅಭಿಷೇಕ್ ಮನು ಸಿಂಘ್ವಿ ಮತ್ತು ಬಿಜೆಪಿ ಪರವಾಗಿ ಅರುಣ್ ಜೇಟ್ಲಿ ವಾದಿಸಿದ್ದರು. ನಾಲ್ಕು ದಿನಗಳ ಸುದೀರ್ಘ ವಿಚಾರಣೆಯ ನಂತರ, ಖುರ್ಷಿದ್ ವಿರುದ್ದ ಕ್ರಮ ತೆಗೆದುಕೊಳ್ಳಲು ನಿರ್ಧರಿಸಲಾಯಿತು. ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದ ಸಲ್ಮಾನ್ ಖುರ್ಷಿದ್, ಆಯೋಗದ ವಿರುದ್ದ ಲಘುವಾಗಿ ಮಾತನಾಡಿದ್ದರು.
ಅಂದಿನ ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಕೇಂದ್ರ ಚುನಾವಣಾ ಆಯೋಗವನ್ನು ದುರಂಹಕಾರಿ, ನಿರಂಕುಶವಾಗಿ ನಡೆದುಕೊಂಡಿದೆ ಎಂದೆಲ್ಲಾ ದೂರಿದ್ದರು. ಆದರೆ, ಇಂತಹ ಟೀಕೆಗಳು ನನ್ನನ್ನು ಧೃತಿಗೆಡಿಸಲಿಲ್ಲ ಎಂದು ಖುರೇಷಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ. ಈ ವಿದ್ಯಮಾನ ನಡೆದ ನಂತರದ ಈದ್ ಕೂಟವೊಂದರಲ್ಲಿ ಖುರೇಷಿ ಭಾಗವಹಿಸಿದ್ದ ವೇಳೆ, ಮನಮೋಹನ್ ಸಿಂಗ್ ಅವರ ಪತ್ರಿಕಾ ಕಾರ್ಯದರ್ಶಿ ಹರೀಶ್ ಖರೆ ಅವರ ಜೊತೆ ಚರ್ಚೆ ನಡೆಯಿತು. ಆ ವೇಳೆ, ಚುನಾವಣಾ ಆಯೋಗದ ಬಗ್ಗೆ, ಕೇಂದ್ರ ಸಚ್ಚಿವ ಸಲ್ಮಾನ್ ಖುರ್ಷಿದ್ ಆಡಿದ್ದ ಮಾತನ್ನು ಪ್ರಧಾನಿಗೆ ತಲುಪಿಸಿ ಎಂದು ಹರೀಶ್ ಅವರಲ್ಲಿ ಕೇಳಿಕೊಂಡಿದ್ದೆ ಎಂದು ಖುರೇಷಿ ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
“ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” – ಮಾಜಿ ಪ್ರಧಾನಿ ಮನಮೋಹನ್ ಸಿಂಗ್
ಆ ಬಳಿಕದ ಬೆಳವಣಿಗೆಯಲ್ಲಿ, ಪ್ರಧಾನಿ ಕಚೇರಿಯಿಂದ ನನಗೆ ಕರೆಬಂದು, ಭೇಟಿ ಮಾಡುವಂತೆ ಸೂಚಿಸಲಾಯಿತು. ಅದರಂತೆಯೇ, ಪ್ರಧಾನಿ ನಿವಾಸಕ್ಕೆ ನಾನು ಹೋದೆ, ಅಲ್ಲಿ ಬಾಗಿಲಲ್ಲೇ ಮನಮೋಹನ್ ಸಿಂಗ್ ನನಗಾಗಿ ಕಾಯುತ್ತಿದ್ದರು. “ಹರೀಶ್ (ಪ್ರಧಾನಿ ಪತ್ರಿಕಾ ಕಾರ್ಯದರ್ಶಿ) ನೀವು ಹೇಳಿದ್ದನ್ನೆಲ್ಲಾ ನನ್ನಲ್ಲಿ ವಿವರಿಸಿದ್ದಾರೆ. ಸಚಿವರ ಮಾತು ನಿಜಕ್ಕೂ ಕಳವಳಕಾರಿ. ನೀವು, ಹಾಗೆ ಭಾವಿಸಿದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದರು. ನಾನು ಒಂದು ಕ್ಷಣ ದಂಗಾಗಿ ಹೋದೆ. ಏನು ಮಾತನಾಡಬೇಕೆಂದು ನನಗೆ ತೋಚಲಿಲ್ಲ” ಎಂದು ಖುರೇಷಿ, ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಚುನಾವಣಾ ಆಯೋಗವು ಕೇವಲ ಭಾರತದ ಹೆಮ್ಮೆಯಲ್ಲ, ಅದು ನಮ್ಮ ದೇಶದ ಪ್ರಜಾಪ್ರಭುತ್ವದ ಆತ್ಮ. ನಾವು ಅದನ್ನು ಕಳೆದುಕೊಂಡರೆ, ಎಲ್ಲವನ್ನೂ ಕಳೆದುಕೊಂಡಂತೆ. ಸಲ್ಮಾನ್ ಖುರ್ಷಿದ್ ಅವರ ಮಾತನ್ನು ತಲೆಗೆ ತೆಗೆದುಕೊಳ್ಳಬೇಡಿ. ಯಾವುದೇ ಸಂದರ್ಭದಲ್ಲಿ ನನ್ನ ಬಳಿ ಮಾತನಾಡಬೇಕೆಂದು ಇದ್ದರೆ, ನನಗೆ ಕರೆ ಮಾಡಿ ಎಂದು ಮನಮೋಹನ್ ಸಿಂಗ್ ಹೇಳಿದ್ದ ಮಾತು, ಈಗಲೂ, ನನ್ನ ಕಿಯಿಯಲ್ಲಿ ಅನುರುಣಿಸುತ್ತಿದೆ ಎಂದು ಪುಸ್ತಕದಲ್ಲಿ ಎಸ್.ವೈ. ಖುರೇಷಿ ಬರೆದುಕೊಂಡಿದ್ದಾರೆ.


