ಚಿಕ್ಕಮಗಳೂರು, ಏ. 10 : ತಾಲೂಕಿನ ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಕ್ಯಧಾರಾ ಬಳಿ ಕೇರಳದ 10ನೇ ತರಗತಿ ವಿದ್ಯಾರ್ಥಿನಿ ಮಂಗಳವಾರ ನಾಪತ್ತೆಯಾಗಿದ್ದು, ಗುರುವಾರವೂ ಗಿರಿ ಪ್ರದೇಶದಲ್ಲಿ ತೀವ್ರ ಹುಡುಕಾಟ ನಡೆಸಲಾಯಿತು. ಆದರೆ, 48 ಗಂಟೆ ಕಳೆದರೂ ಸುಳಿವು ಸಿಕ್ಕಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.
ಎಸ್ಡಿಆರ್ಎಫ್, ಪೊಲೀಸ್, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಸೇರಿ ಐದು ತಂಡಗಳು ದತ್ತಪೀಠ ಭಾಗದ ಇಳಿಜಾರು ಪ್ರದೇಶ, ದೇವಿರಮ್ಮನ ಬೆಟ್ಟದ ಭಾಗದಲ್ಲಿನ ಪ್ರಪಾತಗಳು ಸೇರಿದಂತೆ ಹಲವು ಕಡೆಗಳಲ್ಲಿರೋಪ್ ಬಳಸಿ ಬೆಟ್ಟದ ತಪ್ಪಲಿಗಿಳಿದು ಹುಡುಕಾಟ ನಡೆಸಿದರು. ಜತೆಗೆ ನಾಲ್ಕು ಡ್ರೋನ್ಗಳ ಮೂಲಕವೂ ಪತ್ತೆ ಕಾರ್ಯ ನಡೆಯಿತು. ಆದರು ಬಾಲಕಿ ಪತ್ತೆಯಾಗಲಿಲ್ಲ.
ಬಾಲಕಿ ನಾಪತ್ತೆ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಗುರುವಾರ ಬೆಳಗ್ಗೆಯೇ ನಗರಕ್ಕೆ ಆಗಮಿಸಿದ ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಬಾಲಕಿಯ ಕುಟುಂಬಸ್ಥರ ಜತೆ ಸಮಾಲೋಚನೆ ನಡೆಸಿದರು. ಬಳಿಕ ಬಾಲಕಿ ನಾಪತ್ತೆಯಾದ ಗಿರಿಭಾಗಕ್ಕೆ ತೆರಳಿ ಕಾರ್ಯಾಚರಣೆ ಪರಿಶೀಲಿಸಿ ಪೊಲೀಸ್ ಇಲಾಖೆಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಮಾಹಿತಿ ಪಡೆದರು. ಈ ವೇಳೆ ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಕುಮಾರ್ ಸೇರಿದಂತೆ ಹಲವರು ಇದ್ದರು.
ವಿಶೇಷ ಪೊಲೀಸ್ ತಂಡ ರಚನೆ
ಎರಡು ದಿನಗಳಿಂದ ಗಿರಿಭಾಗದಲ್ಲಿ ಹುಡುಕಾಟ ನಡೆಸಿದರೂ ಬಾಲಕಿ ಪತ್ತೆಯಾಗದ ಹಿನ್ನೆಲೆಯಲ್ಲಿ ಪೊಲೀಸರು ನಾಲ್ಕು ತಂಡಗಳನ್ನು ರಚಿಸಿದ್ದಾರೆ. ಬಾಲಕಿಯ ಕುಟುಂಬ ಪ್ರವಾಸ ಮಾಡಿರುವ ಹಂಪಿ, ಕಾಸರಗೋಡು, ಬೆಂಗಳೂರು, ಮಂಗಳೂರಿಗೆ ತಂಡವನ್ನು ಕಳುಹಿಸಿ ವಿಚಾರಣೆ ನಡೆಸಲಾಗುತ್ತಿದೆ. ಈ ನಾಲ್ಕೂ ಪ್ರದೇಶಗಳಿಂದ ಗಿರಿಭಾಗಕ್ಕೆ ಮಂಗಳವಾರ ಬಂದಿರುವ ವಾಹನಗಳ ಜಾಡು ಹಿಡಿದು ಪೊಲೀಸರ ತಂಡ ಮತ್ತೊಂದು ಆಯಾಮದಲ್ಲಿ ತ ನಿಖೆ ನಡೆಸಿದೆ. ಮತ್ತೊಂದು ಕಡೆಯಲ್ಲಿ ಪೋಷಕರ ಮೊಬೈಲ್ ವಶಕ್ಕೆ ಪಡೆದು ಮಾಹಿತಿ ಕಲೆಹಾಕಿದೆ. ಇದರ ಜತೆಗೆ ಕೇರಳದಿಂದ ಆಗಮಿಸಿದ ಪೊಲೀಸರ ತಂಡವೂ ಗಿರಿಭಾಗದಲ್ಲಿ ಬೀಡು ಬಿಟ್ಟಿದ್ದು ಕಾರ್ಯಾಚರಣೆಯ ಮಾಹಿತಿ ಕಲೆಹಾಕುತ್ತಿದೆ.
ಘಟನೆ ವಿವರ:
ಕೇರಳದ ಪಾಲಕ್ಕಾಡ್ನಿಂದ ಕಳೆದ ಮಂಗಳವಾರ 40 ಕ್ಕೂ ಹೆಚ್ಚು ಜನರು ಒಟ್ಟಿಗೆ ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದರು. ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿರುವ ಮಾಣಿಕ್ಯಧಾರಾ ಜಲಪಾತ ವೀಕ್ಷಣೆಗೆ ತೆರಳಿದ್ದ ವೇಳೆ ಪೋಷಕರಿಂದ ಬೇರ್ಪಟ್ಟ ಬಾಲಕಿ ಸಂಜೆ 5.30 ರ ಸುಮಾರಿಗೆ ನಾಪತ್ತೆಯಾಗಿದ್ದು ರಾತ್ರಿ 8 ಗಂಟೆ ವೇಳೆಗೆ ಪೊಲೀಸರಿಗೆ ತಿಳಿಸಲಾಗಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು ಹುಡುಕಾಟ ಆರಂಭಿಸಿದ್ದು, 48 ಗಂಟೆಗಳು ಕಳೆದರೂ ಬಾಲಕಿಯ ಪತ್ತೆಯಾಗಿಲ್ಲ.

