ಮುಂಡಾಜೆ, ಮೇ 16 : ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿಡಿಗಲ್- ಸೋಮಂತಡ್ಕ ರಸ್ತೆಯಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿರುವುದು ಸುಲಭಕಾರ್ಯಚರಣೆಯೊಂದಕ್ಕೆ ಸಾಕ್ಷಿಯಾಗಿದೆ.
ಇಂದು (ಮೇ16) ಬೆಳಗ್ಗೆ ಈ ರಾಷ್ಟ್ರೀಯ ಹೆದ್ದಾರಿ ಬದಿ ತಾತ್ಕಾಲಿಕ ಅಂಗಡಿಯೊಂದು ತಲೆ ಎತ್ತುತ್ತಿದ್ದಂತೆ ಸಿಸಿ ಕ್ಯಾಮೆರಾ ಮೂಲಕ ಈ ದೃಶ್ಯಗಳು ಸೆರೆಯಾದವು. ತಮ್ಮ ಮೊಬೈಲ್ ನಲ್ಲಿ ಇದನ್ನು ಗಮನಿಸಿದ ಪಿಡಿಒ ತಕ್ಷಣ ಅಂಗಡಿಯನ್ನು ತೆರವುಗೊಳಿಸುವ ಕಾರ್ಯಚರಣೆ ನಡೆಸಿದರು.
ಜನ, ವಾಹನ ದಟ್ಟಣೆ ಹೆಚ್ಚುವ ಮೊದಲೇ ಪಂಚಾಯಿತಿ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಂಗಡಿಯನ್ನು ತೆರವುಗೊಳಿಸುವ ಕ್ರಮಕೈಗೊಂಡರು. ಹೆದ್ದಾರಿ ಬದಿ ತಾತ್ಕಾಲಿಕ ಅಂಗಡಿಗಳನ್ನು ನಿರ್ಮಿಸಲು ಪಂಚಾಯಿತಿ ಯಾವುದೇ ಅವಕಾಶ ನೀಡುವುದಿಲ್ಲ. ಇಂತಹ ಅಂಗಡಿಗಳು ಗ್ರಾಮ ಪಂಚಾಯತಿ ವ್ಯಾಪ್ತಿಯ ರಸ್ತೆ ಬದಿ ಕಂಡು ಬಂದರೆ ತಕ್ಷಣ ಮಾಹಿತಿ ನೀಡುವಂತೆ ಪಿಡಿಒ ಗಾಯತ್ರಿ ತಿಳಿಸಿದ್ದಾರೆ.
ಸೂಚನ ಫಲಕ ಅಗತ್ಯ
ಮುಂಡಾಜೆ ರಕ್ಷಿತಾರಣ್ಯದ ಮಧ್ಯೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಮರಗಳ ನೆರಳು ಸಾಕಷ್ಟು ಇರುವುದರಿಂದ ಈ ಪ್ರದೇಶದಲ್ಲಿ ದೂರದೂರಿನಿಂದ ಬರುವ ಪ್ರಯಾಣಿಕರು ಕೂಡಾ ತಮ್ಮ ವಾಹನಗಳನ್ನು ನಿಲ್ಲಿಸಿ, ವಿರಾಮ ಪಡೆದುಕೊಳ್ಳುತ್ತಾರೆ. ಕೆಲವು ಸಂದರ್ಭದಲ್ಲಿ ಹೆದ್ದಾರಿ ಬದಿಯಲ್ಲೇ ಸ್ವಯಂ ಅಡುಗೆಗಳನ್ನು ಮಾಡಿಕೊಂಡು ಊಟ ಮಾಡುವ ಸನ್ನಿವೇಶಗಳೂ ನಡೆಯುತ್ತವೆ. ಅಲ್ಲದೆ, ಮಲ – ಮೂತ್ರ ವಿಸರ್ಜನೆಗಾಗಿ ಕಾಡಿನೊಳಗಡೆ ತೆರಳುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಈ ಹಿನ್ನಲೆಯಲ್ಲಿ ರಕ್ಷಿತಾರಣ್ಯ ಭಾಗದಲ್ಲಿ ಯಾವುದೇ ರೀತಿಯ ಚಟುವಟಿಕೆಗಳು ನಡೆಸದಂತೆ ಸೂಚನಾ ಫಲಕಗಳನ್ನು ಅಳವಡಿಸಬೇಕಿದೆ. ವಾಹನಗಳನ್ನು ನಿಲ್ಲಿಸಿ ಸಿಗರೇಟ್ ಸೇದುವುದು, ಅಡುಗೆ ಮಾಡಿಕೊಳ್ಳುವಂತಹ ಘಟನೆಗಳು ರಕ್ಷಿತಾರಣ್ಯದ ಬೆಂಕಿ ಅವಘಡಕ್ಕೂ ಕಾರಣವಾಗುವ ಸಾಧ್ಯತೆಗಳಿದೆ. ಹೀಗಾಗಿ, ಅವಘಡ ಸಂಭವಿಸುವ ಮೊದಲೇ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಳ್ಳುವುದು ಅನಿವಾರ್ಯ.

