ನವದೆಹಲಿ, ಮೇ. 05 : ಪಂಚರಾಜ್ಯ ಚುನಾವಣೆಯ ಫಲಿತಾಂಶದ ಬಳಿಕ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಬಲ ಮತ್ತಷ್ಟು ಹೆಚ್ಚಳವಾಗಿದ್ದರೆ, ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟದ ಬಲ ಕುಸಿದಿದೆ. ಅಲ್ಲದೆ ಇಂಡಿಯಾ ಒಕ್ಕೂಟವನ್ನು ಒಗ್ಗೂಡಿಸುವಲ್ಲಿ ಪ್ರಮುಖರು ಎನಿಸಿಕೊಂಡಿದ್ದ ಮಮತಾ ಬ್ಯಾನರ್ಜಿ ಹಾಗೂ ಎಂ.ಕೆ.ಸ್ಟಾಲಿನ್ ವಿಧಾನಸಭಾ ಚುನಾವಣೆಯಲ್ಲಿ ಸೋಲನುಭವಿಸಿರುವುದು ಮೈತ್ರಿಕೂಟದ ಭವಿಷ್ಯದ ಬಗ್ಗೆಯೇ ಕುತೂಹಲವನ್ನು ಹುಟ್ಟುಹಾಕಿದೆ.
74 ವರ್ಷದಲ್ಲೇ ಮೊದಲ ಬಾರಿಗೆ ಪಶ್ಚಿಮ ಬಂಗಾದಲ್ಲಿ ಬಿಜೆಪಿ ಜಯಗಳಿಸಿದೆ. ಜತೆಗೆ ಮೊದಲ ಗೆಲುವಲ್ಲೇ 200ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿರುವುದು ಮೈತ್ರಿಕೂಟದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚು ಮಾಡಿದೆ. ಇದಲ್ಲದೇ ಅಸ್ಸಾಂ ಮತ್ತು ಪುದುಚೆರಿಯಲ್ಲೂ ಗೆಲ್ಲುವ ಮೂಲಕ 22 ರಾಜ್ಯಗಳಿಗೆ ಅಧಿಕಾರವನ್ನು ವಿಸ್ತರಿಸಿದ್ದು, ಈವರೆಗೆ ಕೈಗೊಂಡ ಪಕ್ಷ ಸಂಘಟನಾ ಕಾರ್ಯಕ್ರಮಗಳು ಸರಿಯಿದೆ ಎಂಬುದನ್ನು ತೋರಿಸಿದೆ. ಈ ಗೆಲುವು ದೇಶದಲ್ಲಿ ಮೋದಿ ವರ್ಚಸ್ಸು ದೇಶದಲ್ಲಿ ಇನ್ನೂ ಕೆಲಸ ಮಾಡುತ್ತಿದೆ ಎಂಬುದನ್ನು ಸಾಬೀತು ಮಾಡಿದೆ. ತಮಿಳುನಾಡು ಮತ್ತು ಕೇರಳದಲ್ಲಿ ಗೆಲ್ಲುವ ಎನ್ಡಿಎ ಕನಸಿಗೆ ಈ ಗೆಲುವು ಬಲ ನೀಡಿದೆ.
ಇಂಡಿಯಾ ಭವಿಷ್ಯಕ್ಕೆ ಕುತ್ತು :
ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಕೂಟವನ್ನು ಸೋಲಿಸುವುದಕ್ಕಾಗಿ ಹುಟ್ಟಿಕೊಂಡ ಇಂಡಿಯಾ ಒಕ್ಕೂಟವು ಪ್ರತಿ ಚುನಾವಣೆಯ ಬಳಿಕವೂ ಎದುರಿಸುತ್ತಿರುವ ಸವಾಲು ಈ ಚುನಾವಣೆಯ ಬಳಿಕ ಮತ್ತೆ ಹೆಚ್ಚಾಗಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಹಾಗೂ ತಮಿಳುನಾಡಿನಲ್ಲಿ ಸ್ಟಾಲಿನ್ ಸೋತಿದ್ದು ಮೈತ್ರಿಕೂಟವು 2 ಸ್ಥಂಭಗಳನ್ನು ಕಳೆದುಕೊಂಡಂತಾಗಿದೆ. 2 ರಾಜ್ಯಗಳು ಮೈತ್ರಿಕೂಟದ ಕೈಬಿಟ್ಟು ಹೋಗಿದೆ. ಇದು ಮೈತ್ರಿಕೂಟದಲ್ಲಾಗುತ್ತಿರುವ ಒಳಜಗಳಕ್ಕೆ ಹಿಡಿದ ಕನ್ನಡಿಯಾಗಿದೆ. ಲೋಕಸಭೆ ಚುನಾವಣೆಗೆ ಮಾತ್ರ ಮೈತ್ರಿಕೂಟ, ವಿಧಾನಸಭೆ ಚುನಾವಣೆಗಳಲ್ಲಿ ಪ್ರತ್ಯೇಕ ಎಂಬುದು ಮತದಾರರನ್ನು ಸೆಳೆಯುವಲ್ಲಿ ವಿಫಲವಾಗುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾದಂತಾಗಿದೆ.

