ಕಲ್ಮಂಜ, ಮೇ 20 : ಪಜಿರಡ್ಕ ಬಳಿಯ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಲ್ಲಿ ಓರ್ವ ವಿದ್ಯಾರ್ಥಿ ನೀರುಪಾಲಾಗಿರುವ ಘಟನೆ ಮೇ 19ರ ಸಂಜೆ ವೇಳೆ ನಡೆದಿದೆ. ನೀರಿನ ಸೆಳೆತಕ್ಕೆ ಸಿಲುಕಿದ್ದ ವಿದ್ಯಾರ್ಥಿ ಮೇಲೆ ಬರಲಾಗದೆ ಸಾವನ್ನಪ್ಪಿರುವ ದುರಂತದ ಮಧ್ಯೆ, ನೇತ್ರಾವತಿ ನದಿಯಲ್ಲಿ ಸೂಚನಾ ಫಲಕದ ಅನಿವಾರ್ಯತೆಯ ಬಗ್ಗೆ ವ್ಯಾಪಕ ಆಗ್ರಹ ಕೇಳಿ ಬರುತ್ತಿದೆ.
ಉಜಿರೆ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳ ಗುಂಪು ನೇತ್ರಾವತಿ ನದಿಗೆ ಸ್ನಾನಕ್ಕೆಂದು ಬಂದಿದ್ದರು. ಈ ವೇಳೆ ಬೆಳಗಾವಿ ಮೂಲದ ಶ್ರೀ ಪೂರ್ಣ ಎಂಬ ವಿದ್ಯಾರ್ಥಿ ನೀರುಪಾಲಾಗಿದ್ದ.
ಪಜಿರಡ್ಕ ಶ್ರೀ ಸದಾಶಿವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹರಿಯುತ್ತಿರುವ ನೇತ್ರಾವತಿಗೆ ನದಿಗೆ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟು ಸಹಿತ ಸೇತುವೆಯ ಕೆಳಭಾಗದಲ್ಲಿ ದುರಂತ ಸಂಭವಿಸಿದೆ. ಇದೇ ಭಾಗದಲ್ಲಿ ಧರ್ಮಸ್ಥಳಕ್ಕೆ ಆಗಮಿಸುವ ಪ್ರವಾಸಿಗರು ಕೂಡಾ ಸ್ನಾನಕ್ಕಿಳಿಯುತ್ತಾರೆ. ಬೇರೆ-ಬೇರೆ ಊರಿನ ಯುವಕರು ನದಿಯಲ್ಲಿ ಬಂದು ಹುಚ್ಚಾಟ ಆಡುತ್ತಿರುವ ಬಗ್ಗೆ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ನದಿಯಲ್ಲಿ ರಾತ್ರಿ ಸಮಯದಲ್ಲಿ ಯುವಕರ ಗುಂಪು “ಫೈರ್ ಕ್ಯಾಂಪ್” ನಡೆಸುವ ದೃಷ್ಟಾಂತಗಳೂ ವರದಿಯಾಗಿದೆ.
ಬೇಕಿದೆ “ಎಚ್ಚರಿಕೆ” ಫಲಕ :
ಕಳೆದ ಹಲವು ದಿನಗಳಿಂದ ನೇತ್ರಾವತಿ ನದಿಗೆ ಪ್ರತಿನಿತ್ಯವೂ ಕೂಡಾ ಪ್ರವಾಸಿಗರು ಸೇರಿದಂತೆ, ಸ್ಥಳೀಯ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳು, ಬೇರೆ ಬೇರೆ ಊರಿನ ಯುವಕರು ಸ್ನಾನಕ್ಕೆಂದು ಬರುತ್ತಿದ್ದಾರೆ. ನದಿಯ ಕೆಳಭಾಗದಲ್ಲಿ ಆಳವಾದ ಗುಂಡಿಗಳಿದ್ದು, ಇದರ ಅರಿವು ಇಲ್ಲದೆ ತೆರಳುತ್ತಿದ್ದಾರೆ. ಹೀಗಾಗಿ ನೀರಿಗೆ ಇಳಿಯದಂತೆ ಅಥವಾ ನದಿಯ ಆಳವಾದ ಗುಂಡಿಗಳ ಬಗ್ಗೆ ಎಚ್ಚರಿಕೆಯ ಫಲಕವನ್ನು ಅಳವಡಿಸಬೇಕಾಗಿದೆ. ಗ್ರಾಮೀಣ ಪ್ರದೇಶವಾಗಿರುವುದರಿಂದ ತುರ್ತಾಗಿ ಕ್ರಮ ಕೈಗೊಳ್ಳುವುದು ಅಸಾಧ್ಯದ ಮಾತು. ಹೀಗಾಗಿ, ಶೀಘ್ರವಾಗಿ ಎಚ್ಚರಿಕೆ ಫಲಕದ ಅನಿವಾರ್ಯತೆ ಇದೆ ಎಂಬ ಆಗ್ರಹ ಸ್ಥಳೀಯವಾಗಿ ಕೇಳಿ ಬರುತ್ತಿದೆ.
ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ :
ರಾತ್ರಿ ಸಮಯದಲ್ಲಿ ನೇತ್ರಾವತಿ ನದಿ ತಟದಲ್ಲಿ ಯುವಕರ ಗುಂಪು ಮದ್ಯಪಾನದಂತಹ ಚಟುವಟಿಕೆಗಳನ್ನು ನಡೆಸುವ ಬಗ್ಗೆಯೂ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅಲ್ಲದೆ, ಕೆಲವೊಂದು ಸಂದರ್ಭದಲ್ಲಿ ಹೊರ ಜಿಲ್ಲೆಯಿಂದ ಆಗಮಿಸುವ ಜೋಡಿಗಳೂ ಏಕಾಂತವಾಗಿ ನದಿ ತಟದಲ್ಲಿರುವುದು ಕಂಡು ಬರುತ್ತಿದೆ. ಇದೆಲ್ಲವನ್ನು ತಡೆಯಲು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದು ಉತ್ತಮ ಎಂಬ ಒತ್ತಾಯ ಕೇಳಿಬರುತ್ತಿದೆ.
ಈಗಾಗಲೇ, ವಿದ್ಯಾರ್ಥಿಯೋರ್ವ ನೀರುಪಾಲಾಗಿದ್ದಾನೆ. ಮುಂದೆ ಇಂತಹ ಅವಘಡಗಳು ನಡೆಯದಂತೆ ಕ್ರಮ ಕೈಗೊಳ್ಳಬೇಕಿದೆ. ಪೊಲೀಸ್ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯತ್ ಆದಷ್ಟು ತುರ್ತು ಕ್ರಮ ಕೈಗೊಂಡು, ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಿ ಎಂಬುದೇ ನಮ್ಮ ಆಶಯ.

