ಎಲ್‌ಪಿಜಿ ಚಾರ್ಜ್ ವಸೂಲಿ ನಿಷೇಧ – ಬೆಂಗಳೂರಿನ ಹೋಟೆಲ್‌ಗಳಿಗೆ ಖಡಕ್‌ ಸೂಚನೆ

ಬೆಂಗಳೂರು, ಮಾ. 30 : ನಗರದ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಗ್ರಾಹಕರಿಗೆ ಹೆಚ್ಚುವರಿ ರೂಪದಲ್ಲಿ ವಿಧಿಸಲಾಗುತ್ತಿದ್ದ ‘ಎಲ್‌ಪಿಜಿ ಫೀಸ್’ ಅಥವಾ ‘ಫ್ಯೂಯಲ್ ಸರ್‌ಚಾರ್ಜ್’ಗೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ ಕಟ್ಟುನಿಟ್ಟಿನ ತಡೆ ವಿಧಿಸಿದೆ. ಇಂಧನ ವೆಚ್ಚವನ್ನು ನೆಪವಿಟ್ಟು ಬಿಲ್‌ನಲ್ಲಿ ಪ್ರತ್ಯೇಕ ಶುಲ್ಕ ಸೇರಿಸುವುದು ಗ್ರಾಹಕ ಹಕ್ಕುಗಳ ಉಲ್ಲಂಘನೆ ಎಂದು ಪ್ರಾಧಿಕಾರ ಸ್ಪಷ್ಟಪಡಿಸಿದೆ.

Advertisement

ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ ಹಲವಾರು ಹೋಟೆಲ್‌ಗಳು ಮೆನು ದರ ಮತ್ತು ತೆರಿಗೆಗಳ ಹೊರತಾಗಿ ‘ಎಲ್‌ಪಿಜಿ ಚಾರ್ಜ್’ ಹೆಸರಿನಲ್ಲಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿರುವ ಕುರಿತು ವ್ಯಾಪಕ ದೂರುಗಳು ಕೇಳಿಬಂದಿದ್ದವು. ಈ ಹಿನ್ನೆಲೆ ಕ್ರಮ ಕೈಗೊಂಡಿರುವ CCPA, “ಗ್ಯಾಸ್, ಇಂಧನ ಹಾಗೂ ವಿದ್ಯುತ್ ವೆಚ್ಚಗಳು ವ್ಯವಹಾರದ ಸಾಮಾನ್ಯ ಕಾರ್ಯಾಚರಣೆಯ ಭಾಗ. ಇವುಗಳನ್ನು ಪ್ರತ್ಯೇಕವಾಗಿ ಬಿಲ್‌ನಲ್ಲಿ ತೋರಿಸಿ ಗ್ರಾಹಕರಿಂದ ಹಣ ವಸೂಲಿ ಮಾಡುವುದು ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಪ್ರಕಾರ ಅನ್ಯಾಯದ ವ್ಯಾಪಾರ ಪದ್ಧತಿ” ಎಂದು ಘೋಷಿಸಿದೆ.

ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಜಿ.ಕೆ. ಶೆಟ್ಟಿ ಈ ಕುರಿತು ಪ್ರತಿಕ್ರಿಯಿಸಿ, “ಎಲ್‌ಪಿಜಿ ಶುಲ್ಕವನ್ನು ಪ್ರತ್ಯೇಕವಾಗಿ ವಿಧಿಸುವುದು ಕಾನೂನುಬಾಹಿರ. ನಮ್ಮ ಸದಸ್ಯ ಹೋಟೆಲ್‌ಗಳಿಗೆ ಈ ಬಗ್ಗೆ ಸುತ್ತೋಲೆ ಕಳುಹಿಸಲಾಗುವುದು. ಅನಿಲದ ದರ ಏರಿಕೆಯಿಂದ ನಷ್ಟವಾಗುತ್ತಿದ್ದರೆ, ಮೆನು ಬೆಲೆಯನ್ನು ಶೇ. 5 ರಿಂದ 10 ರಷ್ಟು ಹೆಚ್ಚಿಸುವುದು ಒಳ್ಳೆಯ ಮಾರ್ಗ, ಆದರೆ ಪ್ರತ್ಯೇಕ ಶುಲ್ಕ ವಿಧಿಸುವುದನ್ನು ನಾವು ಬೆಂಬಲಿಸುವುದಿಲ್ಲ” ಎಂದು ತಿಳಿಸಿದ್ದಾರೆ.

ಇದೇ ವೇಳೆ, ಕಾಮತ್ ಹೋಟೆಲ್ಸ್‌ನ ವೀರೇಂದ್ರ ಕಾಮತ್ ಅವರು ಅನಿಲದ ಕೊರತೆಯಿಂದ ಉಂಟಾಗುತ್ತಿರುವ ಸಂಕಷ್ಟವನ್ನು ವಿವರಿಸಿದ್ದಾರೆ. “ನಮಗೆ ದಿನಕ್ಕೆ ಐದು ಸಿಲಿಂಡರ್ ಅಗತ್ಯವಿದ್ದರೆ ಈಗ ಕೇವಲ ಎರಡು ಮಾತ್ರ ಲಭ್ಯವಾಗುತ್ತಿದೆ. ಇದರಿಂದಾಗಿ ಗ್ಯಾಸ್ ಹೆಚ್ಚು ಬಳಸುವ ದೋಸೆಂತಹ ಪದಾರ್ಥಗಳನ್ನು ದಿನವಿಡೀ ನೀಡಲು ಸಾಧ್ಯವಾಗುತ್ತಿಲ್ಲ. ಅವುಗಳನ್ನು ಬೆಳಿಗ್ಗೆ ಮತ್ತು ಸಂಜೆ ಸಮಯಕ್ಕೆ ಮಾತ್ರ ಸೀಮಿತಗೊಳಿಸಿದ್ದೇವೆ. ನಷ್ಟವನ್ನು ಸರಿದೂಗಿಸಲು ಶೇ. 10 ರಷ್ಟು ಬೆಲೆ ಏರಿಕೆ ಅನಿವಾರ್ಯವಾಗಬಹುದು” ಎಂದು ಹೇಳಿದ್ದಾರೆ.

ಇನ್ನೊಂದೆಡೆ, ಸಣ್ಣ ಹೋಟೆಲ್ ಮಾಲೀಕರು ಈ ನಿಯಮದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ವಿಮಾನಯಾನ ಸಂಸ್ಥೆಗಳು ಇಂಧನ ಶುಲ್ಕ ವಿಧಿಸಿದಾಗ ಪ್ರಶ್ನಿಸದವರು, ಹೋಟೆಲ್‌ಗಳನ್ನು ಮಾತ್ರ ಗುರಿಯಾಗಿಸುತ್ತಿರುವುದು ಏಕೆ?” ಎಂದು ಅವರು ಪ್ರಶ್ನಿಸಿದ್ದಾರೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಬಿಜೆಪಿ ಸದಸ್ಯ ಯೋಗೇಶ್ ಗೌಡ ಹತ್ಯೆ ಪ್ರಕರಣ – ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಜೀವಾವಧಿ ಶಿಕ್ಷೆ ಪ್ರಕಟ

ಟಾಪ್ ಸುದ್ದಿಗಳು, ತಾಲೂಕು, ಬಂಟ್ವಾಳ

ಬಂಟ್ವಾಳ : ಬಸ್ ಪ್ರಯಾಣದ ವೇಳೆ ಮಹಿಳೆಯ ಚಿನ್ನದ ಸರ ಕಳವು – ದೂರು ದಾಖಲು

ಟಾಪ್ ಸುದ್ದಿಗಳು, ತಾಲೂಕು, ಮಂಗಳೂರು

ಮಂಗಳೂರು : 2017ರ ಲಾಠಿ ಚಾರ್ಜ್ ಪ್ರಕರಣ – ಎಲ್ಲಾ 101 ಆರೋಪಿಗಳನ್ನು ಖುಲಾಸೆಗೊಳಿಸಿ ನ್ಯಾಯಾಲಯ ಆದೇಶ

⚠️ Contents are protected on this website.