ಹೈದರಾಬಾದ್, ಮೇ 11 : ಪಶ್ಚಿಮ ಏಷ್ಯಾದಲ್ಲಿನ ಯುದ್ಧದ ಅಡ್ಡ ಪರಿಣಾಮಗಳಿಂದ ಜನರನ್ನು ರಕ್ಷಿಸಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರು, ವಿದೇಶಿ ವಿನಿಮಯ ಸಂಗ್ರಹವನ್ನು ಉಳಿಸಲು ಜನರು ಮನೆಯಿಂದಲೇ ಕೆಲಸ ಮಾಡಬೇಕು ಎಂಬ ಸಲಹೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ವಿದೇಶಿ ವಿನಿಮಯವನ್ನು ಉಳಿಸಲು ನಗರಗಳಲ್ಲಿ ಜನ ಮೆಟ್ರೊ ರೈಲು ಬಳಸಬೇಕು, ಕಾರ್ ಪೂಲಿಂಗ್ ಮೊರೆ ಹೋಗಬೇಕು, ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಇ.ವಿ. ಬಳಸಬೇಕು, ಪಾರ್ಸೆಲ್ ರವಾನಿಸಲು ರೈಲ್ವೆಯ ಸೇವೆ ಬಳಸಬೇಕು’ ಎಂಬ ಸಲಹೆಗಳನ್ನು ಕೂಡ ನೀಡಿದ್ದಾರೆ.
ಪೂರೈಕೆ ವ್ಯವಸ್ಥೆಯಲ್ಲಿ ಸಮಸ್ಯೆ ಇದ್ದಾಗ, ಬಿಕ್ಕಟ್ಟಿನಿಂದ ಹೊರಬರಲು ಸರ್ಕಾರ ಬೇರೆ ಬೇರೆ ಕ್ರಮಗಳನ್ನು ಕೈಗೊಂಡರೂ ಕಷ್ಟಗಳು ಹೆಚ್ಚಾಗುತ್ತಿರುತ್ತವೆ ಎಂದು ಅವರು ಹೇಳಿದ್ದಾರೆ. “ಹೀಗಾಗಿ, ಜಾಗತಿಕ ಬಿಕ್ಕಟ್ಟಿನ ಸಂದರ್ಭಗಳಲ್ಲಿ ದೇಶದ ಹಿತವು ಎಲ್ಲಕ್ಕಿಂತ ಮಿಗಿಲಾಗಿ ಇರಬೇಕು, ನಾವು ಕೆಲವು ನಿರ್ಣಯಗಳನ್ನು ತೆಗೆದುಕೊಳ್ಳಬೇಕು’ ಎಂದು ಹೇಳಿದ್ದಾರೆ.
‘ನಾವು ಕೊರೊನಾ ಅವಧಿಯಲ್ಲಿ ಮನೆಯಿಂದಲೇ ಕೆಲಸ ಮಾಡುವ ಬಗೆಯನ್ನು, ವರ್ಚುವಲ್ ವೇದಿಕೆಗಳ ಮೂಲಕ ಸಭೆ ನಡೆಸುವುದನ್ನು ಕಲಿತಿದ್ದೇವೆ. ಅವುಗಳಿಗೆ ನಾವು ಒಗ್ಗಿಕೊಂಡಿದ್ದೇವೆ. ಆ ವಿಧಾನಗಳನ್ನು ಮತ್ತೆ ಶುರು ಮಾಡುವ ಅಗತ್ಯ ಈಗ ಇದೆ’ ಎಂದು ಅವರು ತಿಳಿಸಿದ್ದಾರೆ.

