ತಿರುವನಂತಪುರಂ, ಮಾ. 14 : ಶಬರಿಮಲೆ ದೇವಾಲಯದಲ್ಲಿ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದಂತೆ ಪ್ರಾಚೀನ ಸಂಪ್ರದಾಯ ಮತ್ತು ಪದ್ಧತಿಯನ್ನು ಉಳಿಸಿಕೊಳ್ಳುವುದು ಅಗತ್ಯ ಎಂದು ಕೇರಳದ ಎಲ್ಡಿಎಫ್ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಶುಕ್ರವಾರ ಅಫಿಡವಿಟ್ ಸಲ್ಲಿಸಿದೆ. ಇದು ತಿರುವಾಂಕೂರು ದೇವಸ್ವಂ ಮಂಡಳಿಯ ನಿಲುವಿಗೆ ಅನುಸಾರವಾಗಿದ್ದು, ತನ್ನ ಹಿಂದಿನ ನಿಲುವಿನಿಂದ ಸರ್ಕಾರ ಹಿಂದೆ ಸರಿದಿದೆ. ಪವಿತ್ರ ಮಂದಿರಕ್ಕೆ ಮಹಿಳೆಯರ ಪ್ರವೇಶವನ್ನು ಈ ಹಿಂದೆ ಕೇರಳ ಸರ್ಕಾರ ಬೆಂಬಲಿಸಿತ್ತು.
ಇದೀಗ ಸಿಪಿಎಂ ರಾಜ್ಯ ಘಟಕವು ಶಬರಿಮಲೆ ಸಂಪ್ರದಾಯದ ಪರವಾಗಿ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಸರ್ಕಾರದ ನಿಲುವು ಬದಲಾಗಿದೆ.
“ಅಗತ್ಯಕ್ಕೆ ತಕ್ಕಂತೆ ಕಾನೂನು ಮತ್ತು ಸಾಂವಿಧಾನಿಕ ಆಯಾಮಗಳನ್ನು ಪರಿಶೀಲಿಸಿ ಕೇರಳ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಸೂಕ್ತವಾದ ಪ್ರತಿಕ್ರಿಯೆಯನ್ನು ಸಲ್ಲಿಸಬಹುದು ಎಂದು ಸಿಪಿಎಂ ರಾಜ್ಯ ಘಟಕವು ನಿರ್ಧಾರ ಕೈಗೊಂಡಿದೆ” ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ.ಗೋವಿಂದನ್ ಹೇಳಿಕೆ ನೀಡಿದ್ದರು.
ಧಾರ್ಮಿಕ ವಿಚಾರದ ನಂಬಿಕೆಯನ್ನು ಪಕ್ಷ ಸದಾ ಗೌರವಿಸುತ್ತದೆ. ಈ ಕ್ಷೇತ್ರದ ತಜ್ಞರ ಸಲಹೆಯನ್ನು ಪಡೆದ ಬಳಿಕ ನಿರ್ಧಾರ ಕೈಗೊಳ್ಳಲು ಪಕ್ಷ ಬಯಸಿದೆ ಎಂದು ವಿವರಿಸಿದ್ದಾರೆ. “ಏಳು ಪ್ರಶ್ನೆಗಳಿಗೆ ನಾವು ಉತ್ತರಿಸಿಸಬೇಕಿದೆ. ಪವಿತ್ರ ಮಂದಿರಕ್ಕೆ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಬೇಕೇ ಅಥವಾ ಬೇಡವೇ ಎಂದು ಯಾರೂ ಕೇಳಿಲ್ಲ. ಇದು ಸುಪ್ರೀಂಕೋರ್ಟ್ ನಲ್ಲಿರುವ ಸಾಂವಿಧಾನಿಕ ವಿಚಾರವಾಗಿದ್ದು, ಎಲ್ಲ ಧರ್ಮಗಳಿಗೂ ಸಂಬಂಧಿಸಿದ್ದು” ಎಂದು ಸ್ಪಷ್ಟಪಡಿಸಿದರು. ಋತುಸ್ರಾವ ವಯಸ್ಸಿನ ಮಹಿಳೆಯರು ದೇವಸ್ಥಾನಕ್ಕೆ ಪ್ರವೇಶಿಸಲು ಅವಕಾಶ ನೀಡಿ ನೀಡಿದ್ದ ತೀರ್ಪಿನ ಪರಾಮರ್ಶನಾ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್, ಮಾರ್ಚ್ 14ರ ಮೊದಲು ತನ್ನ ನಿಲುವನ್ನು ಸ್ಪಷ್ಟಪಡಿಸುವಂತೆ ರಾಜ್ಯ ಸರ್ಕಾರಕ್ಕೆ ಗಡುವು ವಿಧಿಸಿತ್ತು.

