ಬೆಳ್ತಂಗಡಿ, ಮಾ.17 : ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ) ಯಲ್ಲಿ ಗ್ರಾಹಕರು ಠೇವಣಿ ಇಟ್ಟಿದ್ದ ಸುಮಾರು 40 ಕೋಟಿ ರೂಪಾಯಿ ವಾಪಸ್ ನೀಡದೆ (ವಂಚನೆ) ಹಗರಣ ಮಾಡಿರುವ ಪ್ರಕರಣಕ್ಕೆ ಸಿಐಡಿ ತನಿಖೆ ಆರಂಭಗೊಂಡಿದೆ. ಇಂದು ಬೆಳಗ್ಗೆ ಸೊಸೈಟಿಗೆ ಬೆಂಗಳೂರಿನಿಂದ ಸಿಐಡಿ ತನಿಖಾ ತಂಡ ಆಗಮಿಸಿ ತನಿಖೆ ಕೈಗೆತ್ತಿಕೊಂಡಿದೆ.
ಪ್ರಕರಣದ ವಿವರ:
ಬೆಳ್ತಂಗಡಿ ನಗರದ ಜ್ಯೂನಿಯರ್ ಕಾಲೇಜ್ ರಸ್ತೆಯಲ್ಲಿರುವ ರಾಮನಗರದದಲ್ಲಿ ಸುಮಾರು 25 ವರ್ಷಗಳಿಂದ ಏಕೈಕ ಬ್ರಾಂಚ್ ಆಗಿ ಕಾರ್ಯಾಚರಿಸುತ್ತಿರುವ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ(ರಿ)ಯಲ್ಲಿ ಆಡಳಿತ ಮಂಡಳಿಯವರು ಗ್ರಾಹಕರಿಗೆ ಸೇರಿದ ಠೇವಣಿ ಹಣ ಸುಮಾರು 40 ಕೋಟಿ ರೂ.ನ್ನು ಗ್ರಾಹಕರಿಗೆ ಹಿಂದಿರುಗಿಸದೆ ವಂಚಿಸಿರುವ ಆರೋಪ ಕೇಳಿಬಂದಿತ್ತು. ಈ ಸಂಬಂಧ ವಂಚನೆಗೊಳಗಾದ ಬೆಳ್ತಂಗಡಿ ನಿವಾಸಿ ದಯಾನಂದ ನಾಯಕ್ ಸೇರಿ ಒಟ್ಟು 13 ಮಂದಿ ಗ್ರಾಹಕರು ಸೊಸೈಟಿಯ 14 ಜನರ ವಿರುದ್ಧ 22-05-2025ರಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ದೂರಿನನ್ವಯ 23-05-2025ರಂದು KARNATAKA PROTECTION OF INTEREST DEPOSITIONS EXORBITANT ACT 2004 (u/s -9) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಮಂಗಳೂರು ಸೆನ್ ಪೊಲೀಸ್ ಠಾಣೆಗೆ ಹೋಗಿ ಇದೀಗ ಸಿಐಡಿಗೆ ಹಸ್ತಾಂತರವಾಗಿದ್ದು, ತನಿಖೆ ಆರಂಭವಾಗಿದೆ.

14 ಆರೋಪಿಗಳು:
40 ಕೋಟಿ ರೂ. ವಂಚನೆ ಆರೋಪಕ್ಕೆ ಸಂಬಂಧಿಸಿ 2021 ರಿಂದ 2024ರ ವರೆಗೆ ಶ್ರೀ ರಾಮ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಲ್ಲಿ ಜವಾಬ್ದಾರಿಯಲ್ಲಿದ್ದ ಸೊಸೈಟಿಯ ಸಿಇಒ ಚಂದ್ರಕಾಂತ್, ಅಧ್ಯಕ್ಷ ಪ್ರಭಾಕರ ಸಿ.ಎಚ್., ಉಪಾಧ್ಯಕ್ಷ ಸದಾನಂದ ಎಂ. ಉಜಿರೆ, ನಿರ್ದೇಶಕರುಗಳಾದ ವಿಶ್ವನಾಥ ಆರ್. ನಾಯಕ್, ಪ್ರಮೋದ್ ಆರ್. ನಾಯಕ್, ವಿಶ್ವನಾಥ, ಜಗನ್ನಾಥ ಪಿ., ರತ್ನಾಕರ, ಸುಮಾ ದಿನೇಶ್ ಉಜಿರೆ, ನಯನಾ ಶಿವಪ್ರಸಾದ್, ಮೋಹನ್ ದಾಸ್ ಕೆ., ಕಿಶೋರ್ ಕುಮಾರ್ ಲಾಯಿಲ, ಬ್ಯಾಂಕ್ ಸಿಬ್ಬಂದಿ ಸರಿತಾ ಎಸ್. ಮತ್ತು ವಿನೋದ್ ಕುಮಾರ್ ಸಿ.ಎಚ್. ಸೇರಿ ಒಟ್ಟು 14 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿತ್ತು.
13 ದೂರುದಾರರು:
ದಯಾನಂದ ನಾಯಕ್, ನಿಧೀಶ್ ಡಿ. ನಾಯಕ್, ಶ್ರದ್ಧಾ ಬಿ., ಮಾಲಿನಿ ಟಿ. ರಾವ್, ತುಕರಾಮ್ ರಾವ್, ಅಕ್ಷಯಾ ಟಿ. ರಾವ್, ಅಕ್ಷತಾ ರಾವ್, ಚೈತ್ರಾ ಭಟ್, ಮೈತ್ರಿ ಭಟ್, ಸ್ವಾತಿ ಭಟ್, ನಂದಕುಮಾರ್, ಬಿ.ಗಣೇಶ್ ಭಟ್, ವಿದ್ಯಾ ಭಟ್ ಸೇರಿ 13 ಮಂದಿ ನೊಂದವರು ದೂರು ನೀಡಿದ್ದರು.
ಸಿಐಡಿ ತನಿಖೆ ಆರಂಭ:
40 ಕೋಟಿ ರೂ. ವಂಚನೆ ಪ್ರಕರಣವಾಗಿರುವ ಕಾರಣ ಇದರ ತನಿಖೆಯನ್ನು ಬೆಳ್ತಂಗಡಿ ಪೊಲೀಸರು ಮಂಗಳೂರು ಸೆನ್ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದರು ಬಳಿಕ ದಕ್ಷಿಣ ಕನ್ನಡದ ಪೊಲೀಸ್ ವರಿಷ್ಠಾಧಿಕಾರಿ ಪ್ರಕರಣವನ್ನು ಸಿಐಡಿ( Crime Investigation Department)ಗೆ ಹಸ್ತಾಂತರಿಸಿದ್ದರು. ಅದರಂತೆ ಇದೀಗ ಅಧಿಕೃತವಾಗಿ ಬೆಂಗಳೂರು ಸಿಐಡಿ ಇನ್ ಸ್ಪೆಕ್ಟರ್ ಹರೀಶ್ ನೇತೃತ್ವದ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.

