ಚಿಕ್ಕಮಗಳೂರು, ಆ. 18 : ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಕರ್ಕೇಶ್ವರ-ಗಬೂರು ಗ್ರಾಮದಲ್ಲಿ ರಸ್ತೆ ದುರಸ್ತಿಯಾಗದೆ ಆಡಳಿತ ವರ್ಗದ ನಿರ್ಲಕ್ಷ್ಯಕ್ಕೆ ಬೇಸತ್ತ ಗ್ರಾಮಸ್ಥರು, ತಾವೇ ಸ್ವತಃ ಕಲ್ಲುಗಳನ್ನು ತಂದು ರಸ್ತೆ ಗುಂಡಿಗಳನ್ನು ಮುಚ್ಚುವ ಮೂಲಕ ಪ್ರತಿಭಟನಾತ್ಮಕವಾಗಿ ರಸ್ತೆ ನಿರ್ಮಿಸಿಕೊಂಡ ಘಟನೆ ವರದಿಗಾಗಿದೆ.
ಆಡಳಿತ ಸರ್ಕಾರದ ಶಾಸಕರಾಗಿರುವ ಟಿ. ಡಿ. ರಾಜೇಗೌಡ ಅವರನ್ನು ಗ್ರಾಮಕ್ಕೆ ಸೂಕ್ತ ರಸ್ತೆ ನಿರ್ಮಿಸಿಕೊಡುವಂತೆ ಕರ್ಕೇಶ್ವರ-ಗಟ್ಟೂರು ಗ್ರಾಮಸ್ಥರು ಹಲವು ಬಾರಿ ಮನವಿ ಮಾಡಿದ್ದರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ರಸ್ತೆಯಲ್ಲಿದ್ದ ಬೃಹತ್ ಗುಂಡಿಗಳಿಗೆ ಮಣ್ಣು ಹಾಕಿದರೆ ಮಳೆಗೆ ಕೊಚ್ಚಿ ಹೋಗುತ್ತದೆ ಎಂದು ಅರಿತ ಗ್ರಾಮದ ಯುವಕರೆಲ್ಲರೂ ಒಂದಾಗಿ, ಗ್ರಾಮದಲ್ಲಿದ್ದ ಬೃಹತ್ ಕಲ್ಲುಗಳನ್ನು ಆಯ್ದು ತಂದು ಗುಂಡಿಗಳಿಗೆ ತುಂಬಿ ಸಂಚಾರಕ್ಕೆ ಅನುಕೂಲ ಮಾಡಿಕೊಂಡಿದ್ದಾರೆ.
ರಸ್ತೆ ಅಭಿವೃದ್ಧಿಪಡಿಸದ ಜನಪ್ರತಿನಿಧಿಗಳ ನಡವಳಿಕೆಯಿಂದ ಆಕ್ರೋಶಗೊಂಡಿರುವ ಗ್ರಾಮಸ್ಥರು, ಕಲ್ಲುಗಳಿಂದ ರಸ್ತೆ ನಿರ್ಮಿಸುತ್ತಿದ್ದ ಪುರಾತನ ಕಾಲದ ದಿನಗಳನ್ನು ನೆನಪಿಸುವಂತೆ ಮಾಡಿದ್ದಕ್ಕಾಗಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ವ್ಯಂಗ್ಯಾತ್ಮಕವಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ. ಶಾಸಕರು ಹಾಗೂ ಆಡಳಿತ ವ್ಯವಸ್ಥೆಯ ನಿರ್ಲಕ್ಷ್ಯದ ವಿರುದ್ಧ ಸ್ಥಳೀಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




