ಮಂಗಳೂರು, ಜು. 21 : ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿರುವುದು ಹಾವು ಕಡಿತಕ್ಕೆ ಔಷಧ ಲಭ್ಯವಿದೆ ಎಂಬ ಶೀರ್ಷಿಕೆಯಡಿಯಲ್ಲಿ ‘ಸ್ನೇಕ್ ವೆನಂ ಆ್ಯಂಟಿಸೆರಂ ಐಪಿ’ ಎಂಬ ಲಸಿಕೆಯ ಫೋಟೊದೊಂದಿಗೆ, “ನಿಮ್ಮಲ್ಲಿ ಯಾರಿಗಾದರೂ ಹಾವು ಕಚ್ಚಿದರೆ 108ಕ್ಕೆ ಕರೆ ಮಾಡಿ ಅವರು ನಿಮ್ಮ ಮನೆಗೆ ಬಂದು ಈ ಇಂಜೆಕ್ಷನ್ ನೀಡುತ್ತಾರೆ. ನೀವು ಅಪಾಯದಿಂದ ಪಾರಾಗುತ್ತೀರಿ. ಈ ಮಾಹಿತಿಗಳನ್ನು ಎಲ್ಲ ಗುಂಪುಗಳಿಗೆ ಹಂಚಿಕೊಳ್ಳಿ” ಎಂಬ ವರದಿ.
ಆದರೆ, ಇದೊಂದು ತಪ್ಪು ಮಾಹಿತಿಯಾಗಿದೆ ಎಂದು ಸ್ವತ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ತಿಮ್ಮಯ್ಯ ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಅವರು, ಈ ಲಸಿಕೆ ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಉಚಿತವಾಗಿ ನೀಡಲಾಗುತ್ತಿದೆ. 108 ಆಂಬುಲೆನ್ಸ್ ವಾಹನ ಕೇವಲ ರೋಗಿಗಳನ್ನು ಆಸ್ಪತ್ರೆಗಳಿಗೆ ಕೊಂಡೊಯ್ಯಲು ಇರುವ ಸರಕಾರಿ ಸೇವಾ ವಾಹನ. ಆದ್ದರಿಂದ ಸಾರ್ವಜನಿಕರು ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರವಾಗಿರುವ ತಪ್ಪು ಸಂದೇಶಗಳ ಬಗ್ಗೆ ಗಮನ ನೀಡಬಾರದು ಎಂದಿದ್ದಾರೆ.
‘ಸ್ನೇಕ್ ವೆನಂ ಆ್ಯಂಟಿಸೆರಂ ಐಪಿ’ ಚುಚ್ಚುಮದ್ದು ಲಸಿಕೆ ಕಡ್ಡಾಯವಾಗಿ ಆಸ್ಪತ್ರೆಯಲ್ಲಿ ನುರಿತ ವೈದ್ಯರ ಮೂಲಕ ನೀಡಲಾಗುತ್ತಿದೆ. ಈ ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗುವುದರಿಂದ ಅತ್ಯಂತ ಎಚ್ಚರಿಕೆಯಿಂದ ನೇರ ನಿಗಾವಣೆ ಮೂಲಕ ನೀಡಲಾಗುತ್ತದೆ. ಹೀಗಾಗಿ ಅದನ್ನು 108 ಆಂಬುಲೆನ್ಸ್ ವಾಹನಗಳ ಮೂಲಕ ತಂದು ನೀಡಲಾಗುವುದಿಲ್ಲ. ಪೂರ್ವಾಪರ ಇಲ್ಲದೆ, ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಬಾರದು. ಹಾವು ಕಡಿತಕ್ಕೊಳಗಾದರೆ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ತೆರಳಿ ಪ್ರಾಥಮಿಕ ಚಿಕಿತ್ಸೆ ಪಡೆದು, ವೈದ್ಯಕೀಯ ಸಲಹೆಗಳನ್ನು ಪಾಲಿಸಬೇಕು. ಸಾರ್ವಜನಿಕರು ಇಂತಹ ಸುಳ್ಳು ಮಾಹಿತಿಯ ಬಗ್ಗೆ ಬಹಳ ಎಚ್ಚರವಹಿಸಬೇಕಾಗಿದೆ.


