ಮುಂಬೈ : 2013ರ ಅತ್ಯಾಚಾರ ಪ್ರಕರಣ – ‘ತೆಹಲ್ಕಾ’ದ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ದೋಷಿ ಎಂದ ಕೋರ್ಟ್ !

ಮುಂಬೈ, ಆ. 06 : ‘ತೆಹಲ್ಕಾ’ದ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅವರಿಗೆ ದೊಡ್ಡ ಹಿನ್ನಡೆಯಾಗಿದ್ದು, 2013ರಲ್ಲಿ ತಮ್ಮ ಕಿರಿಯ ಮಹಿಳಾ ಸಹೋದ್ಯೋಗಿಯೊಬ್ಬರು ದಾಖಲಿಸಿದ್ದ ಅತ್ಯಾಚಾರ ಪ್ರಕರಣದಲ್ಲಿ, ಬಾಂಬೆ ಹೈಕೋರ್ಟ್‌ನ ಗೋವಾ ಪೀಠವು ಇಂದು (ಆ.6) ಅವರನ್ನು ತಪ್ಪಿತಸ್ಥರೆಂದು ಘೋಷಿಸಿದೆ. ತರುಣ್‌ ತೇಜ್‌ಪಾಲ್‌ ಅವರಿಗೆ ನ್ಯಾಯಾಲಯ 10 ವರ್ಷಗಳ ಜೈಲುಶಿಕ್ಷೆಯನ್ನು ವಿಧಿಸಿ ಆದೇಶಿಸಿದೆ.

Advertisement

ತುರುಣ್‌ ತೇಜ್‌ಪಾಲ್ ಅವರನ್ನು ದೋಷಮುಕ್ತಗೊಳಿಸಿದ್ದ ವಿಚಾರಣಾ ನ್ಯಾಯಾಲಯದ 2021ರ ತೀರ್ಪನ್ನು ಹೈಕೋರ್ಟ್ ರದ್ದುಗೊಳಿಸಿದೆ. ಈ ದೋಷಮುಕ್ತ ತೀರ್ಪಿನ ವಿರುದ್ಧ ಗೋವಾ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ನ್ಯಾಯಮೂರ್ತಿಗಳಾದ ಡಾ. ನೀಲಾ ಗೋಖಲೆ ಮತ್ತು ಅಮಿತ್ ಜಮ್‌ಸಂದೇಕರ್ ​​ಅವರನ್ನೊಳಗೊಂಡ ವಿಭಾಗೀಯ ಪೀಠವು, ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಕೂಲಂಕಷವಾಗಿ ಆಲಿಸಿದ ನಂತರ ತೇಜ್‌ಪಾಲ್‌ ಅವರನ್ನು ದೋಷಿ ಎಂದು ತೀರ್ಪು ನೀಡಿತು.

ದೋಷಮುಕ್ತ ತೀರ್ಪನ್ನು ರದ್ದುಗೊಳಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ಪರವಾಗಿ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರೆ, ಹಿರಿಯ ವಕೀಲ ಅಬಾದ್ ಪೊಂಡಾ ಅವರು ತೇಜ್‌ಪಾಲ್ ಪರವಾಗಿ ವಾದಿಸಿದರು. ನವೆಂಬರ್ 2013ರಲ್ಲಿ ಗೋವಾದಲ್ಲಿ ನಡೆದ ‘ಥಿಂಕ್‌ಫೆಸ್ಟ್’ ಕಾರ್ಯಕ್ರಮದ ವೇಳೆ, ಹೋಟೆಲ್ ಒಂದರ ಲಿಫ್ಟ್‌ನಲ್ಲಿ ಹಿರಿಯ ಪತ್ರಕರ್ತ ತೇಜ್‌ಪಾಲ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಮಾಜಿ ಕಿರಿಯ ಸಹೋದ್ಯೋಗಿಯೊಬ್ಬರ ಆರೋಪಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದೆ.

ಮಪುಸಾದ ವಿಚಾರಣಾ ನ್ಯಾಯಾಲಯದಲ್ಲಿ 2017ರಲ್ಲಿ ವಿಚಾರಣೆ ಆರಂಭವಾಗಿತ್ತು ಮತ್ತು 2021ರಲ್ಲಿ ತೇಜ್‌ಪಾಲ್ ದೋಷಮುಕ್ತರಾಗಿದ್ದರು. ಇದರ ನಂತರ ರಾಜ್ಯ ಸರ್ಕಾರವು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿತ್ತು. ರಾಜ್ಯ ಸರ್ಕಾರದ ಮೇಲ್ಮನವಿಯ ವಿಚಾರಣೆಯ ಸಂದರ್ಭದಲ್ಲಿ, “ಲೈಂಗಿಕ ದೌರ್ಜನ್ಯಕ್ಕೊಳಗಾದ ವ್ಯಕ್ತಿಯು ಹೇಗೆ ವರ್ತಿಸಬೇಕು ಎಂಬ ಪೂರ್ವಗ್ರಹಪೀಡಿತ ಕಲ್ಪನೆಗಳ ಆಧಾರದ ಮೇಲೆ, ದೂರುದಾರರ ನಡವಳಿಕೆಯನ್ನು ಮೌಲ್ಯಮಾಪನ ಮಾಡುವ ಮೂಲಕ ಸೆಷನ್ಸ್ ನ್ಯಾಯಾಲಯವು ಗಂಭೀರವಾದ ತಪ್ಪನ್ನು ಎಸಗಿದೆ” ಎಂದು ತುಷಾರ್‌ ಮೆಹ್ತಾ ವಾದಿಸಿದರು.

ತನ್ನ ಖುಲಾಸೆ ಆದೇಶದಲ್ಲಿ ವಿಚಾರಣಾ ನ್ಯಾಯಾಲಯವು “ಲೈಂಗಿಕ ದೌರ್ಜನ್ಯದಿಂದ ಬದುಕುಳಿದ ವ್ಯಕ್ತಿಯೊಬ್ಬರು ಸಂಭವನೀಯವಾಗಿ ತೋರಬಹುದಾದ ಯಾವುದೇ ರೀತಿಯ ಸಾಮಾನ್ಯ ನಡವಳಿಕೆಯನ್ನು ದೂರುದಾರರು ಪ್ರದರ್ಶಿಸಲಿಲ್ಲ” ಎಂದು ಹೇಳಿತ್ತು. ಇದಕ್ಕೆ ಪ್ರತಿಯಾಗಿ “ದೌರ್ಜನ್ಯಕ್ಕೊಳಗಾದ ವ್ಯಕ್ತಿಯ ಪ್ರತಿಕ್ರಿಯೆಯನ್ನು ನಿರ್ಧರಿಸುವ ಯಾವುದೇ ಸಾರ್ವತ್ರಿಕ ಮಾನದಂಡವಿಲ್ಲ. ಏಕೆಂದರೆ ವ್ಯಕ್ತಿಯ ಶಿಕ್ಷಣ, ವ್ಯಕ್ತಿತ್ವ, ಸಾಮಾಜಿಕ ಹಿನ್ನೆಲೆ ಮತ್ತು ಸಂದರ್ಭಗಳಿಗೆ ಅನುಗುಣವಾಗಿ ಪ್ರತಿಕ್ರಿಯೆಗಳು ಬದಲಾಗುತ್ತವೆ” ಎಂದು ಸಾಲಿಸಿಟರ್ ಜನರಲ್ ವಾದಿಸಿದರು.

ಶಿಕ್ಷೆಯ ಆದೇಶದ ನಂತರ, ತುಷಾರ್ ಮೆಹ್ತಾ ಅವರು ತೇಜ್‌ಪಾಲ್ ಅವರನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿದರು. “ದೂರುದಾರರು ಅವರ ಮಗಳ ವಯಸ್ಸಿನವರಾಗಿದ್ದರೂ, ಅವರು ಅಪರಾಧ ಎಸಗಿದ್ದಾರೆ. ಅವರು ಸಂತ್ರಸ್ತೆಗೆ ತಂದೆಯ ಸ್ಥಾನದಲ್ಲಿದ್ದರು ಮತ್ತು ಇಂತಹ ಕೃತ್ಯದಲ್ಲಿ ತೊಡಗಬಾರದಿತ್ತು. ಇದೊಂದು ಮಾದರಿಯಾಗುವಂತಹ ತೀರ್ಪು ಆಗಬೇಕು. ಸಂತ್ರಸ್ತೆ ನಿರಾಕರಿಸಿದರೂ ಅವರು ದೌರ್ಜನ್ಯವನ್ನು ಮುಂದುವರೆಸಿದ್ದಾರೆ. ಮೆಹ್ತಾ ನ್ಯಾಯಾಲಯದಲ್ಲಿ ಪ್ರಖರವಾಗಿ ವಾದ ಮಂಡಿಸಿದರು.

ಶಿಕ್ಷೆಯ ಆದೇಶದ ನಂತರ ನ್ಯಾಯಾಲಯವನ್ನು ಉದ್ದೇಶಿಸಿ ಮಾತನಾಡಿದ ತೇಜ್‌ಪಾಲ್, ತಾನೇ ಸಂತ್ರಸ್ತನಾಗಿದ್ದೇನೆ ಎಂದು ಹೇಳಿಕೊಳ್ಳುವ ಮೂಲಕ ಮೃದು ಧೋರಣೆ ತೋರುವಂತೆ ಕೋರಿದರು ಮತ್ತು ನ್ಯಾಯಾಲಯದ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಮಯ ಕೋರಿದರು. “ನನಗೆ 62 ವರ್ಷ ವಯಸ್ಸು ಮತ್ತು ನಾನು ಸಂತ್ರಸ್ತನಾಗಿದ್ದೇನೆ ಎಂದು ನಂಬಿದ್ದೇನೆ. ನಾನು ಮೇಲ್ಮನವಿ ಸಲ್ಲಿಸಬಹುದು ಎಂಬುದಷ್ಟೇ ನಾನು ಹೇಳಬಲ್ಲೆ. ದಯವಿಟ್ಟು ನನ್ನ ವಿಷಯದಲ್ಲಿ ಮೃದು ಧೋರಣೆ ತೋರಿ” ಎಂದು ತರುಣ್‌ ತೇಜ್‌ಪಾಲ್‌ ಮನವಿ ಮಾಡಿಕೊಂಡಿದ್ದಾರೆ.

Advertisement
Advertisement

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು  : ಮದುವೆಯಾಗುವುದಾಗಿ ನಂಬಿಸಿ ವಂಚನೆ ಪ್ರಕರಣ – ರಾಜಿ ಸಂಧಾನ ವಿಫಲ, ಸೆ. 11ಕ್ಕೆ ಮುಂದಿನ ವಿಚಾರಣೆ

ಟಾಪ್ ಸುದ್ದಿಗಳು, ರಾಜ್ಯ / ದೇಶ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ವಿದೇಶ ಪ್ರವಾಸಗಳ ವೆಚ್ಚ ಬಹಿರಂಗಪಡಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ !

ಟಾಪ್ ಸುದ್ದಿಗಳು, ತಾಲೂಕು, ಬೆಳ್ತಂಗಡಿ

ಬೆಳ್ತಂಗಡಿ : ಭೂ ಪರಿವರ್ತನೆ ಆಗದ ಜಗದಲ್ಲಿ ಹೋಟೆಲ್ – ಲೋಕಾಯುಕ್ತಕ್ಕೆ ದೂರು

⚠️ Contents are protected on this website.