ಕೊಡಗು, ಏ. 05 : ಮಡಿಕೇರಿ ತಾಲೂಕಿನ ಪ್ರಸಿದ್ಧ ಚಾರಣ ತಾಣವಾದ ತಡಿಯಂಡಮೋಳ್ ಬೆಟ್ಟಕ್ಕೆ ಟ್ರೆಕ್ಕಿಂಗ್ಗೆ ತೆರಳಿದ್ದ ಕೇರಳ ಮೂಲದ ಯುವತಿಯೊಬ್ಬರು ನಾಪತ್ತೆಯಾಗಿದ್ದಾರೆ. ಮೂರು ದಿನ ಕಳೆದರೂ ಇನ್ನೂ ಸುಳಿವು ಲಭ್ಯವಾಗಿಲ್ಲ.
ಕೇರಳದ ಕೋಯಿಕ್ಕೋಡ್ ನಿವಾಸಿ 35 ವರ್ಷದ ಶರಣ್ಯ ನಾಪತ್ತೆಯಾದ ದುರ್ದೈವಿ. ಎರ್ನಾಕುಲಂನಲ್ಲಿ ಐಟಿ ಉದ್ಯೋಗಿಯಾಗಿರುವ ಇವರು, ಮಡಿಕೇರಿಯ ಕಕ್ಕಬ್ಬೆ ಗ್ರಾಮದ ಹೋಂಸ್ಟೇಯೊಂದರಲ್ಲಿ ತಂಗಿದ್ದು, ಚಾರಣಕ್ಕೆಂದು ತೆರಳಿದ್ದರು. ಒಂಟಿಯಾಗಿ ಬಂದಿದ್ದ ಕಾರಣ ಒಬ್ಬರನ್ನೇ ಕಳುಹಿಸಿರಲಿಲ್ಲ. ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿ ಬೇರೊಂದು ಗುಂಪಿನ ಜೊತೆಗೆ ಶರಣ್ಯಾ ಅವರನ್ನು ಬೆಟ್ಟದ ಮೇಲೆ ಕಳುಹಿಸಲಾಗಿತ್ತು. ಆದರೆ, ನಿಗದಿತ ಸಮಯಕ್ಕೆ ಅವರು ವಾಪಸ್ ಬಂದಿರಲಿಲ್ಲ. ಗಾಬರಿಯಾದ ಹೋಂಸ್ಟೇ ಮಾಲೀಕರು ಅವರಿಗೆ ಫೋನ್ ಮಾಡಿದಾಗ, ಮೊದಲು ಕರೆ ಸ್ವೀಕರಿಸಿದ ಶರಣ್ಯಾ ತಾನು ದಾರಿ ತಪ್ಪಿರುವುದಾಗಿ ತಿಳಿಸಿದ್ದರು. ಆದರೆ ತಕ್ಷಣವೇ ಫೋನ್ ಕಟ್ ಆಗಿದ್ದು, ಆನಂತರ ಸಂಪರ್ಕಕ್ಕೆ ಸಿಕ್ಕಿಲ್ಲ.
ಕಾಡುಪ್ರಾಣಿಗಳ ದಾಳಿ ಆತಂಕ
ಶರಣ್ಯಾ ಅವರಿಗೆ ಕಳೆದ 15 ವರ್ಷಗಳಿಂದ ಟ್ರೆಕ್ಕಿಂಗ್ ಮಾಡಿದ ಅನುಭವವಿದೆ. ತಡಿಯಂಡಮೋಳ್ ಬೆಟ್ಟದ ದಾರಿಯೂ ಅಷ್ಟು ಕಠಿಣವಾಗಿಲ್ಲದಿದ್ದರೂ, ಇಷ್ಟು ಅನುಭವ ಇರುವವರು ದಾರಿ ತಪ್ಪಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಕಾಡುಪ್ರಾಣಿಗಳ ದಾಳಿ ನಡೆದಿರಬಹುದೇ ಎಂಬ ಆತಂಕವೂ ವ್ಯಕ್ತವಾಗಿದೆ. ಸದ್ಯ ಅರಣ್ಯ ಇಲಾಖೆ, ಪೊಲೀಸ್ ಮತ್ತು ನಕ್ಸಲ್ ನಿಗ್ರಹ ಪಡೆಯ ಸುಮಾರು 60ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ತೀವ್ರ ಶೋಧ ನಡೆಸುತ್ತಿದ್ದಾರೆ. ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ಬಳಿಯ ಸಿಸಿಟಿವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿಲ್ಲದಿರುವುದು ಶೋಧ ಕಾರ್ಯಕ್ಕೆ ಅಡ್ಡಿಯಾಗಿದೆ.

