ಚೆನ್ನೈ, ಮೇ. 06 : ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಪಾರ್ಟಿಯು, ಅತಿದೊಡ್ಡ ಪಾರ್ಟಿಯಾಗಿ ಹೊರಹೊಮ್ಮಿದರೂ, ಸರಳ ಬಹುಮತಕ್ಕೆ ಇನ್ನೂ ಹತ್ತು ಸೀಟುಬೇಕಿದೆ. ಮಂಗಳವಾರ (ಮೇ. 6) ತಡರಾತ್ರಿ ನಡೆದ ಸಭೆಯಲ್ಲಿ, ವಿಜಯ್ ಅವರ ಪಾರ್ಟಿಗೆ ಷರತ್ತುಬದ್ದ ಬೆಂಬಲವನ್ನು ನೀಡಲು ಕಾಂಗ್ರೆಸ್ ಒಪ್ಪಿಕೊಂಡಿದೆ. ಟಿವಿಕೆ ಪಾರ್ಟಿಗೆ ಬೆಂಬಲ ನೀಡಲು ತಮಿಳುನಾಡು ಕಾಂಗ್ರೆಸ್ ಕಮಿಟಿ ಒಪ್ಪಿಕೊಂಡಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸ್ಪಷ್ಟ ಪಡಿಸಿದ್ದಾರೆ. ಟಿವಿಕೆಗೆ ಬೆಂಬಲಿಸಲು ಕಾಂಗ್ರೆಸ್ ಪಾರ್ಟಿಯು, ಎರಡು ಷರತ್ತನ್ನು ಹಾಕಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ, ಹೆಚ್ಚಿನ ಸ್ಪಷ್ಟತೆ ಗುರುವಾರ (ಮೇ. 7) ಸಿಗುವ ಸಾಧ್ಯತೆಯಿದೆ.
ನಾಳೆ ದಳಪತಿ ಜೋಸೆಫ್ ವಿಜಯ್ ಪ್ರಮಾಣವಚನ ಸಾಧ್ಯತೆ
ಸದ್ಯದ ಮಾಹಿತಿಯ ಪ್ರಕಾರ, ಗುರುವಾರ, ಚೆನ್ನೈನ ನೆಹರೂ ಮೈದಾನದಲ್ಲಿ, ಜೋಸೆಫ್ ವಿಜಯ್, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ತಮಿಳುನಾಡು ಚುನಾವಣೆಗು ಮುನ್ನವೇ, ಟಿವಿಕೆ ಜೊತೆ ಹೊಂದಾಣಿಕೆ ಮಾಡಿಕೊಂಡು, ಎಲೆಕ್ಷನ್’ಗೆ ಹೋಗೋಣ ಎನ್ನುವ ಸಲಹೆಯನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ನೀಡಿದ್ದರು. ಆದರೆ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತು ಮಾಜಿ ವಿತ್ತ ಸಚಿವ ಪಿ.ಚಿದಂಬರಂ, ಇದು ಸರಿಯಾದ ನಿರ್ಧಾರವಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ, ಇದು ಕಾರ್ಯರೂಪಕ್ಕೆ ಬರಲಿಲ್ಲ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ಬೆಂಬಲದ ನಂತರೂ ಐದು ಸ್ಥಾನಗಳ ಕೊರತೆ
ಮಂಗಳವಾರ, ತಮಿಳುನಾಡು ಕಾಂಗ್ರೆಸ್ ನಾಯಕರು ವರ್ಚುವಲ್ ಸಭೆಯನ್ನು ನಡೆಸಿದ್ದಾರೆ. ಆ ಸಭೆಯಲ್ಲಿನ ಚರ್ಚೆಯ ಪ್ರಕಾರ, ದೇಶದಲ್ಲಿ ಜಾತ್ಯಾತೀತ ಸರ್ಕಾರ ಸ್ಥಾಪನೆಯಾಗಲು, ವಿಜಯ್’ಗೆ ಬೆಂಬಲ ಸೂಚಿಸುವ ನಿರ್ಧಾರಕ್ಕೆ ಬರಲಾಗಿದೆ. ಕಾಂಗ್ರೆಸ್, ಈ ಚುನಾವಣೆಯಲ್ಲಿ ಐದು ಸ್ಥಾನದಲ್ಲಿ ಗೆದ್ದಿದೆ. ಕಾಂಗ್ರೆಸ್ ಬೆಂಬಲ ಪಡೆದುಕೊಂಡ ಮೇಲೂ, ವಿಜಯ್’ಗೆ ಮತ್ತೆ ಐದು ಸ್ಥಾನದ ಕೊರತೆ ಎದುರಾಗಲಿದೆ. ವಿಸಿಕೆ, ಐಯುಎಂಎಲ್, ಕಮ್ಯೂನಿಸ್ಟ್ ಪಾರ್ಟಿಗಳ ಬೆಂಬಲ ಸಿಗುವ ಸಾಧ್ಯತೆಯಿದೆ. ಆದರೆ, ಕಾಂಗ್ರೆಸ್ ಹಾಕಿರುವ ಷರತ್ತುಗಳ ಬಗ್ಗೆ, ವಿಜಯ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದು ಮುಖ್ಯವಾಗಲಿದೆ.
ಕಾಂಗ್ರೆಸ್ ಹಾಕಿರುವ ಎರಡು ಷರತ್ತುಗಳೇನು?
ವಿಜಯ್ ಅವರಿಗೆ ಬೆಂಬಲ ಸೂಚಿಸಲು ಕಾಂಗ್ರೆಸ್ಸಿನ ತಮಿಳುನಾಡು ಘಟಕ ಎರಡು ಷರತ್ತನ್ನು ಹಾಕಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ತಾವು ಬಯಸಿದ ಕ್ಯಾಬಿನೆಟ್ ಸಚಿವ ಸ್ಥಾನಗಳು ಮತ್ತು ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನವನ್ನು ನೀಡಬೇಕು ಎನ್ನುವ ಕಂಡೀಷನ್ ಹಾಕಿದೆ ಎಂದು ಹೇಳಲಾಗುತ್ತಿದೆ. ಆಯಕಟ್ಟಿನ ಯಾವ ಸ್ಥಾನವನ್ನು ಕಾಂಗ್ರೆಸ್ ಬಯಸುತ್ತಿದೆ ಎನ್ನುವುದು ತಿಳಿದು ಬಂದಿಲ್ಲ. ಈ ಬಗ್ಗೆ, ಟಿವಿಕೆ – ಕಾಂಗ್ರೆಸ್ ನಡುವೆ ಹೊಂದಾಣಿಕೆ ಅಧಿಕೃತವಾದ ನಂತರ ಹೆಚ್ಚಿನ ಮಾಹಿತಿ ಸಿಗಬಹುದು.
ರಾಜ್ಯಪಾಲರಿಗೆ ಪತ್ರ ಬರೆದ ಟಿವಿಕೆ ಪಾರ್ಟಿ
ವಿಜಯ್ ಅವರಿಗೆ ಬೆಂಬಲ ನೀಡಬೇಕೇ, ಬೇಡವೇ ಎನ್ನುವುದನ್ನು ತಮಿಳುನಾಡು ಘಟಕವೇ ನಿರ್ಧರಿಸಲಿದೆ ಎಂದು ಕೆಸಿ ವೇಣುಗೋಪಾಲ್ ಹೇಳಿದ್ದರು. ನಂತರ, ವಿಜಯ್ ಬೆಂಬಲಕ್ಕೆ ನಮ್ಮನ್ನು ಸಂಪರ್ಕಿಸಿದ್ದರು, ಷರತ್ತುಬದ್ದ ಬೆಂಬಲವನ್ನು ಕಾಂಗ್ರೆಸ್ ನೀಡಲು ಒಪ್ಪಿಕೊಂಡಿದೆ ಎಂದು ಎಐಸಿಸಿ ಕೂಡಾ ಸ್ಪಷ್ಟನೆಯನ್ನು ನೀಡಿತ್ತು. ಗುರುವಾರ, ವಿಜಯ್ ಅವರ ಪ್ರಮಾಣವಚನ ಕಾರ್ಯಕ್ರಮ ನಡೆಯುವ ಸಾಧ್ಯತೆಯಿದೆ. ಸರ್ಕಾರ ರಚಿಸಲು ನಮ್ಮನ್ನು ಆಹ್ವಾನಿಸುವಂತೆ, ವಿಜಯ್ ಅವರು ರಾಜ್ಯಪಾಲರಾದ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರಿಗೆ ಪತ್ರ ಬರೆದಿದ್ದಾರೆ.

