ಅಹ್ಮದಾಬಾದ್ : ಏಕರೂಪ ನಾಗರಿಕ ಸಂಹಿತೆ-2026 ಮಸೂದೆಯನ್ನು ಅಂಗೀಕರಿಸಿದ ಗುಜರಾತ್

ಅಹ್ಮದಾಬಾದ್, ಮಾ. 25 : ಗುಜರಾತ್​ ವಿಧಾನಸಭೆ ಮಂಗಳವಾರ(ಮಾ. 24) ಸತತ ಏಳು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ ವಿಪಕ್ಷ ಕಾಂಗ್ರೆಸ್ ಮತ್ತು ಆಪ್ ವಿರೋಧದ ನಡುವೆಯೂ ಗುಜರಾತ್ ಏಕರೂಪ ನಾಗರಿಕ ಸಂಹಿತೆ-2026 (Uniform Civil Code Bill) ಮಸೂದೆಯನ್ನು ಅಂಗೀಕರಿಸಿದೆ.

Advertisement

ಧರ್ಮವನ್ನು ಲೆಕ್ಕಿಸದೆ ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ಲಿವ್-ಇನ್ ಸಂಬಂಧಗಳನ್ನು ನಿಯಂತ್ರಿಸಲು ಸಾಮಾನ್ಯ ಕಾನೂನು ಚೌಕಟ್ಟನ್ನು ಪ್ರಸ್ತಾಪಿಸುವ ಈ ಬಿಲ್​ ಅನ್ನು ಕಾಂಗ್ರೆಸ್ ಮತ್ತು ಎಎಪಿ ಅನುಮೋದಿಸದೆ ಮತ್ತು ಆಯ್ಕೆ ಸಮಿತಿಗೆ ಕಳುಹಿಸಬೇಕೆಂದು ಒತ್ತಾಯಿಸಿದ ಕಾರಣ ಬಹುಮತದ ಧ್ವನಿ ಮೂಲಕ ಮಸೂದೆಯನ್ನು ಅಂಗೀಕರಿಸಲಾಗಿದೆ.

ಸರ್ಕಾರದಿಂದ ನೇಮಿಸಲ್ಪಟ್ಟಿದ್ದ ಸಮಿತಿ ಯುಸಿಸಿ ಅನುಷ್ಠಾನದ ಕುರಿತು ಅಂತಿಮ ವರದಿಯನ್ನು ಸಲ್ಲಿಸಿದ ಒಂದು ವಾರದ ಬಳಿಕ, ನಿನ್ನೆ ಸಿಎಂ ಭೂಪೇಂದ್ರ ಪಟೇಲ್ ಬೆಳಗ್ಗೆ ಸದನದಲ್ಲಿ ಮಸೂದೆಯನ್ನು ಮಂಡಿಸಿದ್ದರು. ಆಡಳಿತಾರೂಢ ಬಿಜೆಪಿ ಮಸೂದೆಯನ್ನು ಸಮಾನತೆಯನ್ನು ಖಚಿತಪಡಿಸಿಕೊಳ್ಳಲು ಸುಧಾರಣೆಯ ಒಂದು ಹೆಗ್ಗುರುತು ಎಂದು ಶ್ಲಾಘಿಸಿದರೆ, ಕಾಂಗ್ರೆಸ್ ಇದು ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಮತ್ತು ಮುಸ್ಲಿಂ ವಿರೋಧಿ ಎಂದು ತೀವ್ರವಾಗಿ ವಿರೋಧಿಸಿದೆ.

ಯುಸಿಸಿ ಮಸೂದೆಯನ್ನು ಅಂಗೀಕರಿಸಿದ ಬಿಜೆಪಿ ಆಡಳಿತದ ಎರಡನೇ ರಾಜ್ಯ ಗುಜರಾತ್. 2024 ಫೆಬ್ರವರಿಯಲ್ಲಿ ಉತ್ತರಾಖಂಡ್ ಯುಸಿಸಿ ಮಸೂದೆಯನ್ನು ಅಂಗೀಕರಿಸಿದ ಮೊದಲ ರಾಜ್ಯವಾಗಿತ್ತು. ಗುಜರಾತ್ ಏಕರೂಪ ನಾಗರಿಕ ಸಂಹಿತೆ, 2026 ಎಂದು ಹೆಸರಿಸಲಾಗಿರುವ ಈ ಪ್ರಸ್ತಾವಿತ ಕಾನೂನು ಇಡೀ ರಾಜ್ಯಕ್ಕೆ ವಿಸ್ತರಿಸಲಿದೆ. ಮತ್ತು ಗುಜರಾತ್‌ನ ಪ್ರಾದೇಶಿಕ ಮಿತಿಯ ಹೊರಗೆ ವಾಸಿಸುವ ನಿವಾಸಿಗಳಿಗೂ ಅನ್ವಯಿಸುತ್ತದೆ ಎನ್ನಲಾಗಿದೆ.

ಆದಾಗ್ಯೂ, ಸಂವಿಧಾನದ ಅಡಿಯಲ್ಲಿ ಸಾಂಪ್ರದಾಯಿಕ ಹಕ್ಕುಗಳನ್ನು ರಕ್ಷಿಸಲಾಗಿರುವ ಪರಿಶಿಷ್ಟ ಪಂಗಡಗಳ(ಎಸ್‌ಟಿ) ಸದಸ್ಯರಿಗೆ ಮತ್ತು ಕೆಲವು ಗುಂಪುಗಳಿಗೆ ಈ ಸಂಹಿತೆ ಅನ್ವಯಿಸುವುದಿಲ್ಲ ಎಂದು ಮಸೂದೆ ದಾಖಲೆ ಹೇಳುತ್ತದೆ. ಇತರ ವಿಷಯಗಳ ಜೊತೆಗೆ, ಲಿವ್-ಇನ್ ಸಂಬಂಧಗಳ ನೋಂದಣಿಗೆ ಹಾಗೂ ಔಪಚಾರಿಕ ಘೋಷಣೆಯ ಮೂಲಕ ಅವುಗಳನ್ನು ಕೊನೆಗೊಳಿಸಲು ಬಿಲ್ ಅವಕಾಶ ನೀಡುತ್ತದೆ.

ಈ ಬಿಲ್​ನಲ್ಲಿ ದ್ವಿಪತ್ನಿತ್ವವನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಒಬ್ಬ ವ್ಯಕ್ತಿ ತನ್ನ ಸಂಗಾತಿ ಜೀವಂತವಿರುವಾಗಲೇ ಎರಡನೇ ವಿವಾಹವಾಗುಂತಿಲ್ಲ. ಮದುವೆಯ ಸಮಯದಲ್ಲಿ ಯಾವುದೇ ಪಕ್ಷವು ಜೀವಂತ ಸಂಗಾತಿಯನ್ನು ಹೊಂದಿಲ್ಲದಿದ್ದರೆ ಮಾತ್ರ ವಿವಾಹವನ್ನು ಸಂಹಿತೆಯಡಿಯಲ್ಲಿ ಮಾನ್ಯವೆಂದು ಪರಿಗಣಿಸಲಾಗುತ್ತದೆ ಎಂದು ಹೇಳಲಾಗಿದೆ.

Share:

ಇತ್ತೀಚಿನ ಸುದ್ದಿಗಳು

ಅಂಕಣಗಳು

ಇದನ್ನೂ ಓದಿ

ಕರಾವಳಿ, ಟಾಪ್ ಸುದ್ದಿಗಳು

ಕುಂದಾಪುರ : ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಅವರಿಗೆ ಶುಭಹಾರೈಸಿದ ಕಾಂಗ್ರೆಸ್ ಹಿರಿಯ ಮುಖಂಡ ಅಶೋಕ್ ಪೂಜಾರಿ ಬೀಜಾಡಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ರಾಜ್ಯದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ – ನೂತನ ಸಿಎಂ ಡಿಕೆಶಿ

ಟಾಪ್ ಸುದ್ದಿಗಳು, ರಾಜ್ಯ / ದೇಶ

ಬೆಂಗಳೂರು : ಡಿಕೆ ಶಿವಕುಮಾರ್ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸ್ಪೀಕರ್ ಯು.ಟಿ.ಖಾದ‌ರ್

⚠️ Contents are protected on this website.