ಉಪ್ಪಳ, ಜು. 22 : ಕಾಲುಸಂಕದಿಂದ ಜಾರಿ ಹೊಳೆಗೆ ಬಿದ್ದ ಯುವತಿಯನ್ನು ಸ್ಥಳೀಯರಾದ ಉದಯ ಕುಮಾರ್ಶೆಟ್ಟಿ ರಕ್ಷಿಸಿದ ಘಟನೆ ಮೀಂಜ ಬಳಿಯ ದೇರಂಬಳದಲ್ಲಿ ಸೋಮವಾರ ಸಂಭವಿಸಿದೆ. ಹಲವು ವರ್ಷಗಳಿಂದ ಸೇತುವೆ ಮುರಿದು ಬಿದ್ದಿದ್ದರೂ ಕೂಡಾ ಕೇರಳ ಸರ್ಕಾರ ಗಾಢ ನಿದ್ದೆಗೆ ಜಾರಿರುವುದು ವಿಪರ್ಯಾಸವೇ ಸರಿ.
ಪುತ್ತೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಹೋದರಿಯನ್ನು ಕರೆದುಕೊಂಡು ಬರುತ್ತಿದ್ದ ಯುವತಿ ಅಡಿಕೆ ಮರದಿಂದ ನಿರ್ಮಿಸಿದ ಕಾಲುಸಂಕದ ಮೇಲೆ ನಡೆಯುತ್ತಿದ್ದ ಸಂದರ್ಭ ಜಾರಿ ಹೊಳೆಗೆ ಬಿದ್ದಿದ್ದಾರೆ. ಈ ಸಂದರ್ಭ ಜೊತೆಯಲ್ಲಿದ್ದ ಸಹೋದರಿ ಸಹಾಯಕ್ಕಾಗಿ ಕಿರುಚಿದ್ದಾಳೆ. ಆಕೆಯ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ಉದಯ ಕುಮಾರ್ಶೆಟ್ಟಿ ತುಂಬಿ ಹರಿಯುತ್ತಿದ್ದ ಹೊಳೆಗೆ ಹಾರಿ ಯುವತಿಯನ್ನು ರಕ್ಷಿಸಿದ್ದಾರೆ.
ಯುವತಿಯ ಕೈಯಲ್ಲಿದ್ದ ಎಸೆಸೆಲ್ಸಿ ಮತ್ತು ಪಿಯು ಅಂಕಪಟ್ಟಿ, ಟ್ಯಾಬ್, ಮೊಬೈಲ್ ಫೋನ್ ಹೊಳೆಯಲ್ಲಿ ಕೊಚ್ಚಿ ಹೋಗಿದೆ.
ಇಲ್ಲಿನ ಹಳೆಯ ಸೇತುವೆಯ ಅರ್ಧ ಭಾಗ ಕುಸಿದಿದ್ದು, ಸ್ಥಳೀಯರು ಅಡಿಕೆ ಮರದಿಂದ ಕಾಲು ಸಂಕ ನಿರ್ಮಿಸಿ ಅದರಲ್ಲಿ ಹೊಳೆ ದಾಟುತ್ತಿದ್ದರು. ಈ ಭಾಗದಲ್ಲಿ ಸುಸಜ್ಜಿತ ಸೇತುವೆ ನಿರ್ಮಿಸಬೇಕೆಂಬ ಸಾರ್ವಜನಿಕರ ಹಲವು ವರ್ಷಗಳ ಬೇಡಿಕೆ ಇನ್ನೂ ಈಡೇರಿಲ್ಲ.


