ಬೆಳ್ತಂಗಡಿ, ಮೇ 12 : ವಿಷು ಕಣಿ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ವತಿಯಿಂದ ಕೇರಳದ ಸಾಂಪ್ರದಾಯಿಕ “ವಿಷು ಕಣಿ – 2026” ಉಜಿರೆಯ ಕೃಷ್ಣಾನುಗ್ರಹ ಸಭಾ ಭವನದಲ್ಲಿ ಮೇ 17ರಂದು ಕೇರಳ ಮತ್ತು ಅಂತರಾಜ್ಯ ಕಲಾವಿದರ ಸಾಂಸ್ಕೃತಿಕ ವೈಭವ ಹಾಗೂ ಕೇರಳ ಸಾಂಪ್ರದಾಯಿಕ ಶೈಲಿಯ 32 ಬಗೆಯ ಊಟೋಪಚಾರಗಳೊಂದಿಗೆ ವಿಷು ಕಣಿ ಹಬ್ಬವು ವಿಜ್ರಂಭಣೆಯಿಂದ ನಡೆಯಲಿದೆ ಎಂದು ಶಾಸಕ ಹರೀಶ್ ಪೂಂಜಾ ಅವರು ಮಾಹಿತಿ ನೀಡಿದ್ದಾರೆ.

ತಾಲೂಕಿನ ನಿರೀಕ್ಷಣಾ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿರುವ ಕೇರಳ ಮೂಲದ ಕುಟುಂಬಗಳ ಒಡನಾಟದೊಂದಿಗೆ ಕೇರಳದ ಸಾಂಪ್ರದಾಯಿಕ ಹಬ್ಬವನ್ನು ಸಾಮೂಹಿಕವಾಗಿ ಆಚರಿಸುವ ಬಗ್ಗೆ ಚಿಂತನೆ ಮೂಡಿದಾಗ ಕಳೆದ 5 ವರ್ಷಗಳ ಹಿಂದೆ “ವಿಷು ಕಣಿ” ಆಚರಿಸುವ ಬಗ್ಗೆ ಚಿಂತನೆ ಮೂಡಿತ್ತು, ಕಳೆದ 04 ವರ್ಷಗಳಿಂದ ನಿರಂತರವಾಗಿ ವಿಷು ಕಣಿ ಹಬ್ಬವನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದೇವೆ. ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯುವ ಕಾರ್ಯಕ್ರಮದಲ್ಲಿ ತಾಲೂಕಿನಲ್ಲಿ ಕೇರಳ ಭಾಷಿಗರಿಗೆ ತವರು ಊರಿನಲ್ಲೇ ಇರುವ ವಿಶಿಷ್ಟ ಅನುಭವ ನೀಡುತ್ತದೆ. ಈಗಾಗಲೇ ತಾಲೂಕಿನ ಪ್ರತೀ ಗ್ರಾಮದಲ್ಲಿ ಕೇರಳ ಭಾಷಿಗರ ಮನೆಗಳಿಗೆ ಭೇಟಿ ನೀಡುವ ಮೂಲಕ ಪೂರ್ವಭಾವಿ ತಯಾರಿಯನ್ನು ವಿಷು ಕಣಿ ಆಚರಣಾ ಸಮಿತಿ ಪ್ರಮುಖರು ಮಾಡುತ್ತಿದ್ದಾರೆ ಎಂದರು.
“ವಿಷು ಕಣಿ – 2026” ಹಬ್ಬದಲ್ಲಿ ಕೇರಳ ಶೈಲಿಯ ತಿಂಡಿಗಳು, ಪಾನೀಯಗಳು ಹಾಗೂ ಮದ್ಯಾಹ್ನ ಕೇರಳ ರಾಜ್ಯದ ಸಾಂಪ್ರದಾಯಿಕ ಶೈಲಿಯ ಸುಮಾರು 33 ಬಗೆಯ ಖಾದ್ಯಗಳ “ಹಬ್ಬದೂಟ”ವು ಇರಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿಶೇಷ ಕೇರಳ ಚೆಂಡೆ ಪ್ರದರ್ಶನ, ಪೂಕಳಂ, ಕೇರಳದ ಹೆಸರಾಂತ ಕಲಾವಿದ ಬಿಬಿನ್ ಜಾರ್ಜ್ ಸೇರಿದಂತೆ ಹಲವಾರು ಕಲಾವಿದರು ಮತ್ತು ಅಂತರಾಜ್ಯ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲೇ “ವಿಷು ಕಣಿ” ಆಚರಿಸುವ ಏಕೈಕ ಜನಪ್ರತಿನಿಧಿ :
ಕರ್ನಾಟಕ ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಕೇರಳ ಭಾಷಿಗರು ವಾಸಿಸುತ್ತಿದ್ದಾರೆ. ಇಂತಹ ಕುಟುಂಬಗಳ ಜೊತೆಯಲ್ಲಿ ಸಾಮೂಹಿಕವಾಗಿ ವಿಷು ಕಣಿ ಆಚರಣೆ ನಡೆಯುತ್ತಿರುವುದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ. ಅಲ್ಲದೇ, ಕೇರಳ ಭಾಷಿಗರ ಸಾಂಪ್ರದಾಯಿಕ ಹಬ್ಬವನ್ನು ತಮ್ಮ ತಾಲೂಕಿನಲ್ಲೇ ವಿಶಿಷ್ಟವಾಗಿ ಆಚರಣೆ ಮಾಡುತ್ತಿರುವ ರಾಜ್ಯದ ಏಕೈಕ ರಾಜಕಾರಣಿ ಶಾಸಕ ಹರೀಶ್ ಪೂಂಜಾರವರು ಎಂದು ಬೆಳ್ತಂಗಡಿ ತಾಲೂಕು ವಿಷು ಕಣಿ ಆಚರಣಾ ಸಮಿತಿ ಪ್ರಮುಖರು ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ, ಬೆಳ್ತಂಗಡಿ ತಾಲೂಕು ವಿಷು ಕಣಿ ಆಚರಣಾ ಸಮಿತಿ ಪ್ರಮುಖರಾದ ಶ್ರೀ ಅನಿಲ್ ಕುಮಾರ್, ಶ್ರೀ ಬಾಲಕೃಷ್ಣ ನೈಮಿಷ, ಶ್ರೀ ದಿವಿನೇಶ್, ಶ್ರೀ ಅಖಿಲೇಶ್, ಶ್ರೀ ಪ್ರಸಾದ್ ಬಿ ಎಸ್., ಶ್ರೀ ಅನಿಜಿತ್ ಸೇರಿದಂತೆ ಮತ್ತಿತ್ತರರು ಉಪಸ್ಥಿತರಿದ್ದರು.

