ಕೋಲ್ಕತಾ, ಮೇ. 06 : ಪಶ್ಚಿಮ ಬಂಗಾಳದಲ್ಲಿ ಮಂಗಳವಾರ ನಡೆದ ಚುನಾವಣೋತ್ತರ ಹಿಂಸಾಚಾರದಲ್ಲಿ ಇಬ್ಬರು ರಾಜಕೀಯ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ, ಬಿಜೆಪಿ ಮತ್ತು ಮತ್ತೊಬ್ಬರು ತೃಣಮೂಲ ಕಾಂಗ್ರೆಸ್ (ಟಿಎಂಸಿ) ತಲಾ ಒಬ್ಬ ಕಾರ್ಯಕರ್ತರು ಪ್ರಾಣ ಕಳೆದುಕೊಂಡಿದ್ದಾರೆ. ರಾಜ್ಯದ ಕೆಲವು ಭಾಗಗಳಲ್ಲಿ ಉದ್ವಿಗ್ನತೆ ಭುಗಿಲೆದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೋಲ್ಕತಾದ ಹೊರವಲಯದಲ್ಲಿರುವ ನ್ಯೂ ಟೌನ್ ಮತ್ತು ಬಿರ್ಭುಮ್ ಜಿಲ್ಲೆಯ ನನೂರ್ನಲ್ಲಿ ಈ ಘಟನೆಗಳು ವರದಿಯಾಗಿದೆ.
ಮಂಗಳವಾರ ಸಂಜೆ ನ್ಯೂ ಟೌನ್ನಲ್ಲಿ ನಡೆದ ವಿಜಯೋತ್ಸವ ಮೆರವಣಿಗೆಗೆ ಸಂಬಂಧಿಸಿದ ಘರ್ಷಣೆಯಲ್ಲಿ ಬಿಜೆಪಿ ಕಾರ್ಯಕರ್ತ ಮಧು ಮಂಡಲ್ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಭಲ್ಲಿಗುರಿ ಪ್ರದೇಶದಲ್ಲಿ ಬಿಜೆಪಿ ಮೆರವಣಿಗೆ ಹಾದುಹೋಗುವಾಗ ಉಂಟಾದ ವಾಗ್ವಾದದ ನಂತರ ಈ ಘಟನೆ ಸಂಭವಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಈ ಸಾವು ಪ್ರತೀಕಾರದ ಹಿಂಸಾಚಾರಕ್ಕೆ ಕಾರಣವಾಯಿತು, ಬಿಜೆಪಿ ಬೆಂಬಲಿಗರು ಟಿಎಂಸಿ ಕಾರ್ಯಕರ್ತರ ಮನೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು, ಇದರಿಂದಾಗಿ ಅಧಿಕಾರಿಗಳು ಕೇಂದ್ರೀಯ ಪಡೆಗಳನ್ನು ಕರೆಸಿಕೊಳ್ಳುವ ಅನಿವಾರ್ಯತೆ ಎದುರಾಯಿತು.
ಬಿರ್ಭೂಮ್ನ ನನೂರ್ ಪ್ರದೇಶದಲ್ಲಿ ಟಿಎಂಸಿ ಕಾರ್ಯಕರ್ತ ಅಬೀರ್ ಶೇಖ್ ಅವರನ್ನು ಕಡಿದು ಹತ್ಯೆಗೈಯಲಾಗಿದೆ. ಸಂತೋಷಪುರ ಗ್ರಾಮದಲ್ಲಿ ಮತ್ತೊಂದು ಗುಂಪಿನೊಂದಿಗೆ ನಡೆದ ವಾಗ್ವಾದದ ಸಂದರ್ಭದಲ್ಲಿ ಪಕ್ಷದ ನನೂರ್ ಅಂಚಲ್ ಸಮಿತಿಯ ಸದಸ್ಯ ಶೇಖ್ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಿಎಂಸಿ ಶಾಸಕರಾಗಿ ಆಯ್ಕೆಯಾದ ಬಿಧಾನ್ ಮಾಝಿ, ದಾಳಿಯ ಹಿಂದೆ ಬಿಜೆಪಿ ಬೆಂಬಲಿಗರಿದ್ದಾರೆ ಎಂದು ಆರೋಪಿಸಿ ಶೇಖ್ ಪಕ್ಷದ ಸಕ್ರಿಯ ಕಾರ್ಯಕರ್ತ ಎಂದಿದ್ದಾರೆ. ಆದರೆ,
ಬಿಜೆಪಿ ಕೃತ್ಯದಲ್ಲಿ ಯಾವುದೇ ಭಾಗಿಯಾಗಿಲ್ಲ ಎಂದು ನಿರಾಕರಿಸಿದೆ. ಪಕ್ಷದ ನಾಯಕ ಶ್ಯಾಮಪಾದ ಮಂಡಲ್, ಈ ದಾಳಿಗೆ ಕಾರಣರಾದವರನ್ನು ಗುರುತಿಸಲು ನ್ಯಾಯಯುತ ಮತ್ತು ನಿಷ್ಪಕ್ಷಪಾತ ತನಿಖೆಗೆ ಕರೆ ನೀಡಿದ್ದಾರೆ.
ತತ್ ಕ್ಷಣ ಬಂಧಿಸಿ: ಜ್ಞಾನೇಶ್ ಕುಮಾರ್ ಸೂಚನೆ
ಚುನಾವಣೋತ್ತರ ಹಿಂಸಾಚಾರ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿರುವವರನ್ನು ತತ್ ಕ್ಷಣ ಬಂಧಿಸುವಂತೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ. ಮಂಗಳವಾರ ರಾಜ್ಯದಲ್ಲಿ ಚುನಾವಣೋತ್ತರ ಹಿಂಸಾಚಾರದಲ್ಲಿ ಇಬ್ಬರು ಸಾವನ್ನಪ್ಪಿದ ನಂತರ ಮತ್ತು ಹಲವಾರು ಪಕ್ಷದ ಕಚೇರಿಗಳನ್ನು ಧ್ವಂಸಗೊಳಿಸಿದ ನಂತರ ಚುನಾವಣಾ ಆಯೋಗದಿಂದ ನಿರ್ದೇಶನ ಬಂದಿದೆ.

